ಪಾಕಿಸ್ತಾನ ಮೂಲದ ನಾಲ್ಕು ಉಗ್ರಗಾಮಿ ಸಂಘಟನೆಗಳು ಒಂದಾಗಿ ಭಾರತದ ವಿರುದ್ಧ ಕಾರ್ಯಾಚರಿಸುತ್ತಿರುವ ಕಾರಣ ರಾಷ್ಟ್ರ ಎದುರಿಸುತ್ತಿರುವ ಬೆದರಿಕೆಯ ಮಟ್ಟ ಹೆಚ್ಚಿದೆ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಅಲ್ಲದೆ ಇವರ ಸಂಭಾಷಣೆಗಳ ಮಧ್ಯೆ ತಾಲಿಬಾನ್ ಎಂಬ ಶಬ್ದವೂ ನುಸುಳಿತ್ತು ಎಂಬುದಾಗಿಯೂ ಅವರು ಶುಕ್ರವಾರ ತಿಳಿಸಿದ್ದಾರೆ.
ಲಷ್ಕರ್-ಇ-ತೋಯ್ಬಾ, ಜೈಶ್-ಇ-ಮೊಹಮ್ಮದ್, ಜಮಾತ್-ಉಲ್-ಮುಜಾಹಿದೀನ್ ಹಾಗೂ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳು ಈ ಹಿಂದೆ ಪ್ರತ್ಯೇಖವಾಗಿ ಕಾರ್ಯಾಚರಿಸುತ್ತಿದ್ದು, ಇದೀಗ ಒಂದಾಗಿವೆ ಎಂದು ಸಚಿವರು ಹೇಳಿದ್ದಾರೆ.
ನಾಲ್ಕು ಸಂಘಟನೆಗಳು ಒಟ್ಟಾಗಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭೀತಿಯ ಮಟ್ಟವು ಹೆಚ್ಚಿದೆ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
"ಭಾರತದದೊಳಕ್ಕೆ ನುಸುಳಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದಿದೆ. ಆದರೆ ಇವರು ತಾಲಿಬಾನಿಗಳೆಂದು ಯಾರೂ ಗುರುತಿಸಿಲ್ಲ ಎಂದು ಅವರು ಹೇಳಿದ್ದಾರೆ. 30 ತಾಲಿಬಾನಿ ಉಗ್ರರು ಕಾಶ್ಮೀರ ಪ್ರವೇಶಿಸಿದ್ದಾರೆ ಎಂಬ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಇವರಿಗೆ ಯಾರು ನಿರ್ದೇಶನ ನೀಡುತ್ತಾರೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ. ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಕಾಲ ಪಕ್ವವಾಗಿಲ್ಲ. ಅದು ಐಎಸ್ಐಯೇ, ಅಥವಾ ಇತರ ಯಾವುದೇ ರಾಷ್ಟ್ರದ ಏಜೆನ್ಸಿಯೇ, ಇಲ್ಲ ರಾಷ್ಟ್ರರಹಿತರೇ ಅಥವಾ ತಾಲಿಬಾನ್ ಇದರ ಹಿಂದಿದೆಯೇ ಎಂಬುದನ್ನು ಈಗ ಹೇಳಲಾಗುವುದಿಲ್ಲ ಎಂದು ಅವರು ನುಡಿದರು.
ಅವರ ಸಂಭಾಷಣೆಗಳಲ್ಲಿ ತಾಲಿಬಾನ್ ಎಂಬ ಶಬ್ದ ನುಸುಳಿದೆ. ಆದರೆ ಈ ಕ್ಷಣದಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗಳೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಚಿದು ತಿಳಿಸಿದರು.
|