ಆಡ್ವಾಣಿಯನ್ನು ತಾನು ಪರ್ಯಾಯ ಪ್ರಧಾನಿ ಎಂದು ಪರಿಗಣಿಸುವುದಿಲ್ಲ ಎಂಬ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಹತಾಶೆಯ ಸ್ಪಷ್ಟ ಸೂಚನೆ ಎಂದು ಲೇವಡಿ ಮಾಡಿದೆ.
"ಪ್ರಧಾನಿಯವರ ಹೇಳಿಕೆಯು ಹತಾಶೆಯ ಸ್ಪಷ್ಟ ಸೂಚನೆ. ಅವರು ತಮ್ಮ ನಿಷ್ಕ್ರೀಯತೆಯಿಂದ ಅಸ್ತಿತ್ವದಲ್ಲಿರಲು ಬಯಸುತ್ತಾರೆ. ಸಿಂಗ್ ಅವರು ಹೇಗೋ ಅಪ್ಪಿತಪ್ಪಿ ಪ್ರಧಾನಿಯಾಗಿದ್ದಾರೆ. ಇದೀಗ ಅವರು ಮಾತಿನಲ್ಲಿಯೂ ತಾನೊಬ್ಬ ದುರ್ಬಲ ಎಂಬುದನ್ನು ತೋರಿಸುತ್ತಿದ್ದಾರೆ" ಎಂದು ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
"ಅವರು ಅದೃಷ್ಟದಿಂದ ಮೂಡಿದ ರಾಜಕಾರಣಿ. ಅವರು ಪ್ರಚಾರದ ನೇತೃತ್ವ ವಹಿಸರು. ಅವರೆಂದು ಚುನಾವಣೆ ಗೆಲ್ಲಲಿಲ್ಲ. ಮತ್ತು ಅವರು ಗೆಲ್ಲುವ ಸಾಧ್ಯತೆಯೂ ಇಲ್ಲ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
"ರಾಷ್ಟ್ರವು ಒಬ್ಬ ಬಲಿಷ್ಠ ನಾಯಕನನ್ನು ಬಯಸುತ್ತಿದೆ ಎಂದು ಪ್ರಧಾನಿ ಕೊನೆಗೂ ಒಪ್ಪಿಕೊಂಡಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಪ್ರಧಾನಿಯವರ ಸಾಧನೆ ಎಂದರೆ, ವಾಜಪೇಯಿ ಆಡಳಿತದಿಂದಾಗಿ ಉತ್ತುಂಗದಲ್ಲಿದ್ದ ಆರ್ಥಿಕತೆಯ ಉತ್ತರಾಧಿಕಾರಿಯಾಗಿದ್ದು, ಇದೀಗ ರಾಷ್ಟ್ರವನ್ನು ಸಾಲದಲ್ಲಿ ಮುಳುಗಿಸಿ ತೆರಳುತ್ತಿರುವುದಾಗಿದೆ" ಎಂದು ಜೇಟ್ಲಿ ಆರೋಪಿಸಿದರು.
ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಹೆಚ್ಚಿನ ಹಣಕಾಸು ಒದಗಿಸುವ ಆರ್ಥಶಾಸ್ತ್ರವನ್ನು ಆಡ್ವಾಣಿ ಮಾತನಾಡುತ್ತಿದ್ದರೆ, ಮಿತಿಮೀರಿದ ತೆರಿಗೆ ಮತ್ತು ದುಂದುವೆಚ್ಚವನ್ನು ಯುಪಿಎ ಮತ್ತು ಮನಮೋಹನ್ ಸಿಂಗ್ ಪ್ರತಿಪಾದಿಸುತ್ತಿದ್ದಾರೆ ಎಂದು ಅವರು ದೂರಿದರು. |