ಹಿಂದುತ್ವವು ಸಾಂಸ್ಕೃತಿಕ ಮತ್ತು ಧಾರ್ಮಿಕ ಅನೇಕತೆಯಲ್ಲಿ ನಂಬುಗೆ ಇಟ್ಟಿರುವ ಭಾರತೀಯರ ಸಿದ್ಧಾಂತವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
"ಹಿಂದುತ್ವವು ಭಾರತೀಯರ ಸಿದ್ಧಾಂತವಲ್ಲ. ಹೆಚ್ಚಿನವರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಅನೇಕತೆಯಲ್ಲಿ ನಂಬುಗೆ ಇರಿಸಿದ್ದಾರೆ" ಎಂದು ಅವರು ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಬುದ್ಧಿಜೀವಿಗಳ ಸಭೆಯಲ್ಲಿ ಪ್ರಣಬ್ ಹೇಳಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಮೋಹನ್ ದೇವ್ ಅವರ ಚುನಾವಣಾ ಪ್ರಚಾರದಂಗವಾಗಿ ಏರ್ಪಡಿಸಲಾಗಿತ್ತು.
"ರಾಮಮಂದಿರ ನಿರ್ಮಾಣ ವಿಚಾರವು ಚುನಾವಣಾ ವಿಚಾರವಾಗಲು ಸಾಧ್ಯವಿಲ್ಲ ಮತ್ತು ಜನತೆ ಪಕ್ಷಗಳ ರಾಜಕೀಯದ ಆಧಾರವನ್ನು ಪರಿಗಣಿಸಬೇಕೇ ಹೊರತು ಒಂದೇ ವಿಚಾರವನ್ನು ಮಾತ್ರ ಗಮನಿಸಬಾರದು" ಎಂಬುದಾಗಿ ಕಾಂಗ್ರೆಸ್ ಪಕ್ಷದ ಆಪತ್ಭಾಂದವನೆಂದು ಕರೆಸಿಕೊಳ್ಳುವ ಪ್ರಣಬ್ ನುಡಿದರು.
ಬಾಂಗ್ಲಾ ಗಡಿಯಲ್ಲಿ ಆಶ್ರಯಪಡೆಯುವ ಕೆಲವು ಜನರು ಉಗ್ರವಾದಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ನುಡಿದರು. ಈ ವಿಚಾರವನ್ನು ತಾನು ಬಾಂಗ್ಲಾ ಸರ್ಕಾರದೊಂದಿಗೆ ಚರ್ಚಿಸಿದ್ದು, ಈ ಕುರಿತು ಶೀಘ್ರ ಕ್ರಮಕೈಗೊಳ್ಳುವ ಭರವಸೆ ಲಭಿಸಿದೆ ಎಂದು ಅವರು ತಿಳಿಸಿದ್ದಾರೆ. |