ಕಾಂಗ್ರೆಸ್ನ್ನು ಮುದುಕಿ ಎಂದು ಕರೆದಿರುವ ಬಿಜೆಪಿಯ ಮೇಲೆ ತನ್ನ ತೀವ್ರ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್, ಬಿಜೆಪಿಯಲ್ಲಿರುವ ಮುದುಕರಾದ ಎಲ್.ಕೆ. ಆಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅರಬ್ಬೀ ಸಮುದ್ರಕ್ಕೆಸೆಯಿರಿ ಎಂದು ಹೇಳಿದೆ.
ಗೋವಾದಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ಗೆ ಮುದಿಪಕ್ಷದ ಪಟ್ಟ ತೊಡಿಸುವ ಬಿಜೆಪಿ ತಮ್ಮ ಪ್ರಧಾನಿ ಅಭ್ಯರ್ಥಿ ಮುದುಕ ಎಂಬುದನ್ನು ಮರೆತಂತಿದೆ. ಮೊದಲು ಬಿಜೆಪಿ ವಯೋವೃದ್ಧ ವಾಜಪೇಯಿಯವರನ್ನು ಅರಬ್ಬಿ ಸಮುದ್ರಕ್ಕೆಎಸೆಯಲಿ. ನಂತರ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಅಡ್ವಾಣಿ ಅವರನ್ನೂ ಸಮುದ್ರಕ್ಕೆ ಎಸೆದುಬಿಡಲಿ ಎಂದು ಖಾರವಾಗಿ ನುಡಿದಿದ್ದರು.
ಮುದಿ ಪಕ್ಷವಾಗಿರುವ ಕಾರಣ ಜನತೆ ಕಾಂಗ್ರೆಸನ್ನು ಕಸದಬುಟ್ಟಿಗೆಸೆಯಬೇಕು ಎಂದು ಬಿಜೆಪಿ ನಾಯಕ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
ಮಕ್ಕಳು, ಮಹಿಳೆಯರು ಮತ್ತು ವಯಸ್ಸಾದವರನ್ನು ನಾವು ಹೇಗೆ ನಡೆಸಿಕೊಳ್ಳುವುದರ ಮೇಲೆ ಒಬ್ಬ ವ್ಯಕ್ತಿ ಇಲ್ಲವೇ ಸಮಾಜ ಯಾ ರಾಷ್ಟ್ರದ ಸಂಸ್ಕೃತಿಯನ್ನು ಅಳೆಯಲಾಗುತ್ತದೆ ಎಂದು ಅವರು ನುಡಿದರು. ಅಲ್ಲದೆ ಕಾಂಗ್ರೆಸ್ ಯಾವತ್ತು ಸಂಪ್ರದಾಯ ಮತ್ತು ಪರಂಪರೆಯನ್ನು ಗೌರವಿಸುತ್ತದೆ ಎಂದು ನುಡಿದರು.
ಕೆಲವು ವರ್ಷಗಳ ಹಿಂದೆ ಕರ್ನಾಟಕದ ಅಂದಿನ ಮುಂಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರೂ ಪತ್ರಕರ್ತರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಪತ್ರಕರ್ತರನ್ನೆಲ್ಲ ಸಮುದ್ರಕ್ಕೆ ಎಸೆದುಬಿಡಬೇಕು ಎಂದಿದ್ದರು. |