ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇರಲೇ ಇಲ್ಲ. ಅಲ್ಲಿ ಇದ್ದದ್ದು ರಾಮ ಮಂದಿರ. ಅದನ್ನು ಬಾಬರ ನಿರ್ನಾಮ ಮಾಡಿ ಅಲ್ಲಿ ಮುಸ್ಲಿಂ ಧಾರ್ಮಿಕ ಕೇಂದ್ರವನ್ನು ಕಟ್ಟಿಸಿದ ಎಂದು ಕಾಂಗ್ರೆಸ್ ಮುಖಂಡ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರ ಸಹೋದರ ಗುಲಾಂ ಅಲಿ ಆಜಾದ್ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ.
ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿರುವ ಕಟ್ಟಾ ಕಾಂಗ್ರೆಸಿಗ ಗುಲಾಂ ನಬಿ ಅಜಾದ್ ಅವರ ಸಹೋದರ ಈ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ನಲ್ಲಿದ್ದುಕೊಂಡೇ ಎಂದು ಹುಬ್ಬೇರಿಸಬೇಕಿಲ್ಲ. ಅವರು ಕಳೆದ ಶುಕ್ರವಾರ ಬಿಜೆಪಿ ಸೇರಿಕೊಂಡಿದ್ದಾರೆ.
ಅಲ್ಲಿ ಮಸೀದಿ ಇರಲೂ ಇಲ್ಲ, ಆ ವಿವಾದಿತ ಪ್ರದೇಶದಲ್ಲಿ ಎಂದಿಗೂ ಅದು ನಿರ್ಮಾಣಗೊಳ್ಳುವುದೂ ಇಲ್ಲ. ಅಲ್ಲಿ ರಾಮ ಮಂದಿರವೇ ಇತ್ತು, ಅದು ಅಲ್ಲಿಯೇ ಶಾಶ್ವತವಾಗಿ ಇರಬೇಕು ಎಂದಿದ್ದಾರೆ ಆಜಾದ್.
ಗುಲಾಂ ನಬಿ ಅವರನ್ನು ಪಕ್ಷದ ಪ್ರಧಾನ ಮುಸ್ಲಿಂ ಮುಖ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವುದರಿಂದ ಅವರ ಸಹೋದರ ನೀಡಿರುವ ಈ ಹೇಳಿಕೆಯು ನಬಿಗೆ ತೀವ್ರ ಇರಿಸುಮುರಿಸು ಉಂಟು ಮಾಡುವ ಸಾಧ್ಯತೆಗಳಿವೆ.
ವಿವಾದಿತ ಪ್ರದೇಶವನ್ನು ನಮಾಜ್ಗೆ ಬಳಸಬಾರದು ಎನ್ನುತ್ತದೆ ಇಸ್ಲಾಂ. ವಿವಾದಿತ ಸ್ಥಳದ ಬಗ್ಗೆ ಖುರಾನ್ನಲ್ಲಿ ಏನು ಹೇಳಿದೆ ಎಂಬುದನ್ನು ಮುಸ್ಲಿಮ್ ವಿದ್ವಾಂಸರು ಖುರಾನ್ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಗುಲಾಂ ಅಲಿ ಸವಾಲು ಹಾಕಿದ್ದಾರೆ.
ಈ ಪ್ರಕರಣದ ಬಗ್ಗೆ ಪ್ರಬುದ್ಧತೆ ಪ್ರದರ್ಶಿಸಿರುವ ಬಿಜೆಪಿಯನ್ನು ಶ್ಲಾಘಿಸಿದ ಅವರು, ಬಿಜೆಪಿಯೆಂದಿಗೂ ಅಲ್ಲಿ ಬಲವಂತವಾಗಿ ರಾಮ ಮಂದಿರ ನಿರ್ಮಿಸಬೇಕೆಂಬ ನಿಲುವು ಹೊಂದಿಲ್ಲ ಮತ್ತು ಈ ವಿಷಯದಲ್ಲಿ ಅದು ದಬ್ಬಾಳಿಕೆ ನಡೆಸುತ್ತಿಲ್ಲ ಎಂದರು.
ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿಗೆ ಔರಂಗಜೇಬನೇ ಕಾರಣ ಎಂದು ಆರೋಪಿಸಿದ ಅವರು, ಇಸ್ಲಾಂ ಅನ್ನು ಯಾವತ್ತಿಗೂ ಖಡ್ಗದ ಮೂಲಕ ಹರಡಲಾಗಿಲ್ಲ. ಸಮುದಾಯದಲ್ಲಿ ಒಡಕು ಮೂಡಿಸಿದ್ದೇ ಔರಂಗಜೇಬ. ಇಂದಿನವರೆಗೂ ಮುಸ್ಲಿಮರು ಒಗ್ಗಟ್ಟಾಗಿಲ್ಲ ಎಂದ ಅವರು, ರಾಮ ಮಂದಿರ ವಿಷಯವನ್ನು ಬಿಜೆಪಿಯು ಚುನಾವಣೆ ಬಂದಾಗ ಮಾತ್ರ ಕೆದಕುತ್ತದಲ್ಲ ಎಂದು ಕೇಳಿದಾಗ ಉತ್ತರಿಸುತ್ತಾ, ಪ್ರತಿಯೊಂದಕ್ಕೂ ಸಮಯ ಎಂಬುದೊಂದಿದೆ. ರೈತರು ಚಳಿಗಾಲದಲ್ಲಿ ಬಿತ್ತನೆ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು. |