"ವಿದೇಶಿ ಉಗ್ರರಿಗಿಂತ ದೇಶದಲ್ಲಿರುವ ಜನತೆಯಿಂದ ರಾಷ್ಟ್ರವು ಅಪಾಯವನ್ನು ಎದುರಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷವನ್ನು ದೃಷ್ಟಿಯಲ್ಲಿರಿಸಿ ಹೇಳಿರುವುದಕ್ಕೆ ಅವರು ಕ್ಷಮೆ ಯಾಚಿಸಬೇಕು" ಎಂದು ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಒತ್ತಾಯಿಸಿದ್ದಾರೆ.
ಜಾರ್ಖಂಡ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಡಿರುವ ಭಾಷಣದಲ್ಲಿ ಸೋನಿಯಾ ಗಾಂಧಿ "ರಾಷ್ಟ್ರವನ್ನು ಪ್ರವೇಶಿಸುತ್ತಿರುವ ವಿದೇಶಿ ಉಗ್ರರಿಗಿಂತ ನಾವು ದೇಶದೊಳಗಿನ ಜನರಿಂದ ಹೆಚ್ಚಿನ ಅಪಾಯ ಎದುರಿಸುತ್ತಿದ್ದೇವೆ" ಎಂಬ ಹೇಳಿಕೆಯು ಆಘಾತಕಾರಿಯಾಗಿದೆ ಎಂದು ಆಡ್ವಾಣಿ ಹೇಳಿದ್ದಾರೆ.
"ಸೋನಿಯಾ ಗಾಂಧಿ ನೇರವಾಗಿ ನಮ್ಮ ಪಕ್ಷವನ್ನು ಹೆಸರಿಸದಿದ್ದರೂ, ಇದು ನಮ್ಮ ಪಕ್ಷವನ್ನುದ್ದೇಶಿಸಿ ಮಾಡಿರುವ ಆರೋಪವೆಂಬುದು ಸ್ಪಷ್ಟ" ಎಂದು ಅವರು ನುಡಿದರು.
ಭಾರತವು ಐತಿಹಾಸಿಕ ಸಂಪ್ರದಾಯವನ್ನು ಹೊಂದಿದೆ. 1962 ಹಾಗೂ 1965ರಲ್ಲಿ ಯುದ್ಧಗಳು ಸಂಭವಿಸಿದಾಗಲೂ, ಆಗಿನ ಪ್ರಧಾನಿಗಳಾಗಿದ್ದ, ಜವಾಹರ್ ಲಾಲ್ ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರುಗಳು ಜನಸಂಘ ಹಾಗೂ ಆರೆಸ್ಸೆಸ್ ಪಾತ್ರವನ್ನು ಪ್ರಶಂಸಿದ್ದರು ಎಂದು ನುಡಿದರು. ಅಪರೂಪ ಎಂಬಂತೆ ನಹೆರು ಅವರು 1963ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಆರೆಸ್ಸೆಸ್ ತುಕಡಿ ಕಳುಹಿಸುವಂತೆ ಕೋರಿದ್ದರು ಎಂಬುದನ್ನು ಆಡ್ವಾಣಿ ನೆನಪಿಸಿಕೊಂಡರು.
"ಸೋನಿಯಾರಿಗೆ ಅವರದ್ದೇ ಪಕ್ಷದ ಇತಿಹಾಸ ತಿಳಿದಿಲ್ಲ. ಅವರು ಇಂತಹ ಹೇಳಿಕೆಗಳನ್ನು ಮಾಡುತ್ತಿದ್ದಾರೆ. ಇದು ಅಪನಿಂದನೆಯಾಗಿದ್ದು, ತನ್ನ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಇಲ್ಲವೇ, ಅಲ್-ಖೈದಾದಂತಹ ಮೂಲಭೂತವಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪ್ರಧಾನಿ ಪಟ್ಟದ ಆಕಾಂಕ್ಷಿ ಆಡ್ವಾಣಿ ನುಡಿದರು. |