ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ವಿರುದ್ಧ ತನ್ನ ಟೀಕೆಯನ್ನು ಮುಂದುವರಿಸಿರುವ ಮನಮೋಹನ್ ಸಿಂಗ್, ಕಾಂಧಾರ್ ವಿಮಾನ ಅಪಹರಣ ಪ್ರಕರಣದ ವೇಳೆ 'ಉಕ್ಕಿನ ಮನುಷ್ಯ' ಕರಗಿ ಹೋಗಿದ್ದರು ಎಂದು ಟೀಕಿಸಿದ್ದಾರೆ.
ಮುಂಬೈಯಲ್ಲಿ ನಡೆದ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "1999ರಲ್ಲಿ ಉಗ್ರರು ಇಂಡಿಯನ್ ಏರ್ಲೈನ್ಸ್ನ ಐಸಿ-814 ವಿಮಾನ ಅಪಹರಿಸಿದ್ದಾಗ ಬಿಜೆಪಿಯು ಮಾಡಿದಂತೆ, ನವೆಂಬರ್ 26ರಂದು ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆಸಿದ್ದ ಸಂದರ್ಭದಲ್ಲಿ ತನ್ನ ಸರ್ಕಾರವು ಉಗ್ರರೊಂದಿಗೆ ಮಾತುಕತೆಗೆ ಮುಂದಾಗಿರಲಿಲ್ಲ" ಎಂದು ಹೇಳಿದರು.
"ಇದು ಬಿಜೆಪಿ ಸರ್ಕಾರ ಮತ್ತು ನಮ್ಮ ಸರ್ಕಾರಕ್ಕಿರುವ ವ್ಯತ್ಯಾಸ ಎಂದು ಸಿಂಗ್ ನುಡಿದರು. ಆಡ್ವಾಣಿ ಅವರು ಉಗ್ರರ ಬಿಡುಗಡೆಗೆ ಒಪ್ಪಿ ತಮ್ಮ ಸಂಪುಟ ಸಹೋದ್ಯೋಗಿ ಜಸ್ವಂತ್ ಸಿಂಗ್ ಅವರರೊಂದಿಗೆ ಉಗ್ರರನ್ನು ಕಳುಹಿಸಿ ಕೊಟ್ಟಿದ್ದರು ಎಂಬುದಾಗಿ ಅವರು ವ್ಯಂಗ್ಯವಾಡಿದರು.
ಉಗ್ರರ ಬಿಡಗಡೆಗೆ ಮುನ್ನ ತಮ್ಮೊಂದಿಗೆ ಸಮಾಲೋಚನೆ ನಡೆಸಲಾಗಿತ್ತು ಎಂಬ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಅವರ ಹೇಳಿಕೆಯನ್ನು ಅಲ್ಲಗಳೆದ ಸಿಂಗ್, ಈ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ. "ಆಡ್ವಾಣಿ ಅವರು ಸಂದರ್ಶನ ಒಂದರಲ್ಲಿ ಉಗ್ರರನ್ನು ಬಿಡುಗಡೆ ಮಾಡಿ ವಿಮಾನದಲ್ಲಿ ಕಳುಹಿಸಿದ್ದು ತನಗೆ ತಿಳಿದಿರಲಿಲ್ಲ" ಎಂದು ಹೇಳಿದ್ದರೆಂದು ನೆನಪಿಸಿದರು.
ಅಲ್ಲದೆ, ಬಾಬರಿ ಮಸೀದಿ ಧ್ವಂಸವನ್ನು ಪ್ರಸ್ತಾಪಿಸಿ ತಾನು ಮಸೀದಿಯ ಮೂಲೆಯಲ್ಲಿ ನಿಂತು ಆನಂದಾಶ್ರು ಹರಿಸಲಾರೆ ಎಂದರಲ್ಲದೆ, ಜಿನ್ನಾ ಕುರಿತ ಆಡ್ವಾಣಿ ಹೇಳಿಯನ್ನು ಕೆದಕಿ, ಗಳಿಗೆಗೊಂದು ಮಾತನಾಡುವುದಿಲ್ಲ ಎಂದು ಟೀಕಿಸಿದರು.
ಆಡ್ವಾಣಿಯವರು ಟಿವಿ ಮಾಧ್ಯಮದಲ್ಲಿ ಬಹಿರಂಗ ಚರ್ಚೆಗೆ ನೀಡಿರುವ ಆಹ್ವಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಆಡ್ವಾಣಿಯರಿಗೆ ಪ್ರಧಾನಿ ಸ್ಥಾನಮಾನ ಯಾಕೆ ನೀಡಬೇಕೆಂದು ತನಗೆ ತಿಳಿಯುತ್ತಿಲ್ಲ. ಐದು ವರ್ಷಗಳ ಉತ್ತಮ ಆಡಳಿತದ ದಾಖಲೆ ನನ್ನ ಬಳಿ ಇರುವಾಗ, ಜನತೆ ನನ್ನ ಕಾರ್ಯಕ್ಷಮತೆಯನ್ನು ಪರಾಂಬರಿಸುತ್ತಾರೆ ಎಂದು ಅವರು ನುಡಿದರು. |