ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪದೇಪದೇ ದುರ್ಬಲ ಪ್ರಧಾನಿ ಎಂಬುದಾಗಿ ಟೀಕಿಸುತ್ತಿರುವ ಆಡ್ವಾಣಿಯವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ನ ಯುವನೇತಾರ ರಾಹುಲ್ ಗಾಂಧಿ, ಕಾಂಧಾರ್ ವಿಮಾನ ಅಪಹರಣದ ವೇಳೆ ಉಗ್ರರನ್ನು ಬಿಡುಗಡೆ ಮಾಡಿದ್ದ ಆಡ್ವಾಣಿಯವರ ಸುದೃಢ ನಾಯಕತ್ವಕ್ಕೆ ಇರುವ ರುಜವಾತು ಏನೆಂದು ಪ್ರಶ್ನಿಸಿದರು." ತನಗೆ ಉಗ್ರರನ್ನು ಬಿಡುಗಡೆ ಮಾಡುವ ವಿಚಾರ ತಿಳಿದಿರಲಿಲ್ಲ" ಎಂಬುದಾಗಿ ಆಡ್ವಾಣಿ ಸಂದರ್ಶನ ಒಂದರಲ್ಲಿ ಹೇಳಿರುವುದನ್ನು ಉಲ್ಲೇಖಿಸಿದ ರಾಹುಲ್, "ಇದಕ್ಕೆ ಎರಡು ಸಾಧ್ಯತೆಗಳಿವೆ. ಒಂದೋ ಅವರು ಸತ್ಯ ಹೇಳುತ್ತಿಲ್ಲ. ಇಲ್ಲವೇ ಹಿರಿಯ ನಾಯಕ ಆಗಿನ ಪ್ರಧಾನಿ ಎ.ಬಿ. ವಾಜಪೇಯಿ ಅವರಿಗೆ ಆಡ್ವಾಣಿ ಮೇಲೆ ನಂಬುಗೆ ಇರಲಿಲ್ಲ" ಎಂಬುದಾಗಿ ಟೀಕಿಸಿದರು. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು." ಪ್ರಧಾನಿಗೆ ತನ್ನ ಮೇಲೆ ನಂಬಿಕೆ ಇಲ್ಲವೆಂದಾದರೆ ಆಡ್ವಾಣಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು" ಎಂದು ಗಾಂಧಿ ಕುಟುಂಬದ ಕುಡಿ ಕಿಡಿ ನುಡಿದರು. ಅಲ್ಲದೆ, ಕಾಂಧಾರ್ ವಿಮಾನ ಅಪಹರಣದ ವೇಳೆಗೆ ಅವರು ಒತ್ತಡದಲ್ಲಿದ್ದರೇ ಅಥವಾ ವಾಜಪೇಯಿಗೆ ಅವರ ಮೇಲೆ ನಂಬುಗೆ ಇರಲಿಲ್ಲವೇ, ಯಾವುದು ಸರಿ ಎಂಬುದನ್ನು ತಾನು ತಿಳಿಯಲು ಬಯಸುತ್ತೇನೆ ಎಂದು ರಾಹುಲ್ ನುಡಿದರು.ರಾಹುಲ್ ಪ್ರಧಾನಿ ಪಟ್ಟಕ್ಕೇರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯಾಗುವುದು ಪ್ರಮುಖ ವಿಚಾರವಲ್ಲ. ತಾನೇನಾಗುತ್ತೇನೆ ಎಂಬುದಕ್ಕಿಂತ ರಾಷ್ಟ್ರಕ್ಕೆ ತಾನು ಏನನ್ನು ನೀಡಬಹುದು ಎಂಬ ಭಾವನೆಯಲ್ಲೇ ಯಾವತ್ತೂ ತನ್ನ ಕುಟುಂಬವು ರಾಜಕೀಯದಲ್ಲಿ ತೊಡಗಿತ್ತು" ಎಂದು ನುಡಿದರು.ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ತರುಣ ನಾಯಕ, ಅವರನ್ನು ಯುವಮನಸ್ಸಿನ ವ್ಯಕ್ತಿ ಎಂದು ಶ್ಲಾಘಿಸಿದರು. ಪಕ್ಷದ ನೀತಿಗಳು ಮತ್ತು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಿಂಗ್ ಅವರ ನಿಲುವಿನಿಂದಾಗಿ ಅವರನ್ನು ಯುವಕನೆಂದು ಪರಿಗಣಿಸುವುದಾಗಿ ರಾಹುಲ್ ನುಡಿದರು. |