ಭಯೋತ್ಪಾದನೆ ರಾಷ್ಟ್ರವು ಎದುರಿಸುತ್ತಿರುವ ಅತೀ ದೊಡ್ಡ ಸವಾಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಕೊಂಡಿದ್ದು, ಭಯೋತ್ಪಾದನೆ ಪಿಡುಗಿನ ನಿಗ್ರಹಕ್ಕೆ ಕಾಂಗ್ರೆಸ್ ಸರ್ಕಾರವೊಂದೇ ಪರಿಣಾಮಕಾರಿ ನಾಯಕತ್ವವನ್ನು ಜನತೆಗೆ ನೀಡಬಲ್ಲದು ಎಂದು ಪ್ರತಿಪಾದಿಸಿದ್ದಾರೆ.
'ಸರ್ಕಾರ ಮತ್ತು ಭದ್ರತಾ ಪಡೆಗಳು ಏಕಾಂಗಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಈ ದುಷ್ಟಶಕ್ತಿಗಳ ವಿರುದ್ಧ ಜನತೆ ಟೊಂಕ ಕಟ್ಟಿ ನಿಲ್ಲಬೇಕಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಜನರನ್ನು ಒಂದುಗೂಡಿಸಲು ಪರಿಣಾಮಕಾರಿ ನಾಯಕತ್ವ ಅಗತ್ಯವಾಗಿದ್ದು, ಕಾಂಗ್ರೆಸ್ ಮಾತ್ರ ಮುಂದಾಳತ್ವ ವಹಿಸಲು ಸಾಧ್ಯ' ಎಂದು ಸಿಲ್ಚಾರ್ನಲ್ಲಿ ಚುನಾವಣೆ ರ್ಯಾಲಿ ಉದ್ದೇಶಿಸಿ ಸೋನಿಯ ಮಾತನಾಡುತ್ತಿದ್ದರು.
ಭಯೋತ್ಪಾದನೆ ಭಾರತಕ್ಕೆ ಮಾತ್ರ ಸಮಸ್ಯೆಯಲ್ಲ. ಇದೊಂದು ಜಾಗತಿಕ ವಿದ್ಯಮಾನವಾಗಿದ್ದು, ಜನರಲ್ಲಿ ಭದ್ರತೆಯ ಪ್ರಜ್ಞೆಯನ್ನು ಒಡೆದು, ಅಭದ್ರತೆಯ ಭಾವನೆ ಮೂಡಿಸುವುದು ಭಯೋತ್ಪಾದಕರ ಮುಖ್ಯ ಗುರಿ ಎಂದು ಅವರು ಹೇಳಿದರು. ಕೇಂದ್ರ ಗೃಹಸಚಿವ ಸಂತೋಷ್ ಮೋಹನ್ ದೇವ್ ಪರವಾಗಿ ಸೋನಿಯ ಸಿಲ್ಚಾರ್ನಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.
ಹಿಂದಿನ ಎನ್ಡಿಎ ಆಡಳಿತಾವಧಿಯಲ್ಲಿ ಭಯೋತ್ಪಾದಕರನ್ನು ಬಿಜೆಪಿ ನಿಭಾಯಿಸಿದ ರೀತಿಯನ್ನು ಅವರು ಟೀಕಿಸಿದರು. ಆಡ್ವಾಣಿ ಕೇಂದ್ರ ಗೃಹಸಚಿವರಾಗಿದ್ದಾಗ ಸಂಸತ್ತಿನ ಮೇಲೆ ಕೂಡ ದಾಳಿ ನಡೆಯಿತೆಂದು ಹೇಳಿದರು.
|