ದೇಶದ 714 ಮಿಲಿಯ ಮತದಾರರಲ್ಲಿ ಏಕೈಕ ವ್ಯಕ್ತಿಯೊಬ್ಬರು ಈ ವಾರ ಆರಂಭವಾಗುವ ಮತದಾನದಲ್ಲಿ ಸರತಿ ಸಾಲಿನಲ್ಲಿ ನಿಂತು ಮತಹಾಕಬೇಕಾಗಿಲ್ಲ. ಏಕೆಂದರೆ ಅವರೊಬ್ಬರಿಗೋಸ್ಕರ ಮತಯಂತ್ರವೊಂದು ಕಾದು ಕುಳಿತಿದೆ.
ಹಿಂದೂ ಅರ್ಚಕ ಭಾರತ್ದಾಸ್ ದರ್ಶನ್ದಾಸ್ ಗುಜರಾತಿನ ದಟ್ಟಕಾಡಿನಲ್ಲಿರುವ ಸಿಂಹಧಾಮವೊಂದರಲ್ಲಿ ಏಕಾಂತದ ಬದುಕನ್ನು ನಡೆಸುತ್ತಿದ್ದಾರೆ. ಆದರೆ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ರಾಷ್ಟ್ರವನ್ನು ಮುನ್ನಡೆಸುವ ಪಕ್ಷದ ಆಯ್ಕೆಗೆ ಅವರದ್ದೂ ಒಂದು ಪಾಲಿರುತ್ತದೆ. ಅವರಿಗಾಗಿಯೇ ವಿಶೇಷವಾಗಿ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದೆ.
ದರ್ಶನದಾಸ್ ತನ್ನ ಮತದಾನದ ಹಕ್ಕು ಚಲಾಯಿಸುವಂತೆ ಮಾಡುವುದೂ ಅಷ್ಟು ಸುಲಭದ ಕೆಲಸವಲ್ಲ. ಮೂವರು ಚುನಾವಣಾ ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರು ಎಲೆಕ್ಟ್ರಾನಿಕ್ ಮತಯಂತ್ರವನ್ನು ಹಿಡಿದು ನದಿ ಮತ್ತು ಮರಳಿನ ದಿಬ್ಬಗಳನ್ನು ದಾಟಿ ಅವರನ್ನು ಮುಟ್ಟಬೇಕಾಗಿದೆ. ಅಧಿಕಾರಿಗಳು ತಮ್ಮ ಮತ ಪಡೆಯಲು ಗಂಟೆಗಟ್ಟಲೆ ನಡೆಯಬೇಕಾಗಿರುವುದಕ್ಕೆ ತಾವು ವಿಷಾದಿಸುವುದಾಗಿ ದರ್ಶನ್ ದಾಸ್ ಹೇಳಿದರು.
ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತ ನಿರ್ಣಾಯಕವಾಗಿದ್ದು ಮತದಾನವು ತಮಗೆ ಅಮೂಲ್ಯವಾಗಿದೆ ಎಂದು ದೂರವಾಣಿಯಲ್ಲಿ ಅವರು ತಿಳಿಸಿದ್ದಾರೆ. 'ಇಲ್ಲಿ ವಿದ್ಯುತ್, ಕುಡಿಯುವ ನೀರು ಅಥವಾ ಆರೋಗ್ಯಸೇವೆಯ ಸೌಲಭ್ಯಗಳಿಲ್ಲ. ಸಮೀಪದ ಹಳ್ಳಿ ಮುಟ್ಟಲು ಎರಡು ಗಂಟೆ ನಡೆಯಬೇಕು. ಕೆಲವು ಬಾರಿ ಸಿಂಹಗಳು ಆಗಮಿಸಿ ಮನೆಯ ಹೊರಗೆ ಕುಳಿತಿರುತ್ತವೆ. ಅವು ನಿರ್ಗಮಿಸುವವರೆಗೆ ತಾವು ಹೊರಕ್ಕೆ ಬರುವಂತಿಲ್ಲ' ಎಂದು ದಟ್ಟ ಕಾಡಿನ ನಡುವೆ ಸಣ್ಣ ಮಂದಿರದಲ್ಲಿ ವಾಸಿಸುತ್ತಿರುವ ದರ್ಶನ್ ದಾಸ್ ಹೇಳುತ್ತಾರೆ.
|