ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿ ಭಾರತದೊಳಕ್ಕೆ ನುಸುಳಲು ಮಹಿಳಾ ಭಯೋತ್ಪಾದಕರನ್ನು ಸಜ್ಜುಗೊಳಿಸಲಾಗುತ್ತಿದೆಯೆಂಬ ವಿಷಯವನ್ನು ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಮಂಗಳವಾರ ಬಹಿರಂಗಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಅಸ್ತವ್ಯಸ್ತಗೊಳಿಸಲು ಭಾರತಕ್ಕೆ ನುಸುಳುವ ಭಯೋತ್ಪಾದಕರಲ್ಲಿ ಮಹಿಳೆಯರೂ ಸೇರಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಕಪೂರ್ ಹೇಳಿಕೆ ಹೊರಬಿದ್ದಿದೆ. ಚುನಾವಣೆಗಿಂತ ಮುಂಚೆ ಗಡಿಯಾಚೆಯಿಂದ ನುಸುಳುವ ಪ್ರಯತ್ನಗಳು ಗಮನಾರ್ಹವಾಗಿ ಏರಿಕೆಯಾಗಲಿದೆ ಎಂದು ಜ.ಕಪೂರ್ ಹೇಳಿದರು. ಆದರೆ ಯಾವುದೇ ದಾಳಿಯನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಪೂರ್ಣ ಸಜ್ಜಾಗಿವೆ ಎಂದು ಅವರು ಹೇಳಿದರು.
ಗಡಿಯಾಚೆಯಿಂದ ಚುನಾವಣೆ ಸಂದರ್ಭದಲ್ಲಿ ಅತಿಕ್ರಮಣಕ್ಕೆ ಉಗ್ರರು ಯೋಜಿಸಿದ್ದಾರೆಂದು ಸೇನೆಗೆ ತಿಳಿದಿದ್ದು, ನಿಯಂತ್ರಣ ರೇಖೆಯಲ್ಲಿ ಮೂರು ಹಂತಗಳ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆಯೆಂದು ಸೇನಾ ಮುಖ್ಯಸ್ಥರು ತಿಳಿಸಿದರು. ತಾಲಿಬಾನ್ ಉಗ್ರರು ಭಾರತಕ್ಕೆ ನುಸುಳುವ ಸಾಧ್ಯತೆ ಕುರಿತು ಪ್ರಶ್ನಿಸಿದಾಗ, ಜಮ್ಮು ಕಾಶ್ಮೀರದಲ್ಲಿ ಅಂತಹ ಉಗ್ರಗಾಮಿಗಳ ಜಾಡು ಪತ್ತೆಯಾಗಿಲ್ಲ.
ಲಷ್ಕರೆ ತೊಯ್ಬಾ ಮತ್ತು ಜೈಷೆ ಮೊಹಮದ್ ಮುಂತಾದ ಇತರೆ ಉಗ್ರರ ಸುಳಿವು ಸಿಕ್ಕಿದೆ ಎದು ಅಂತಾರಾಷ್ಟ್ರೀಯ ವಿಚಾರಸಂಕಿರಣದ ನೇಪಥ್ಯದಲ್ಲಿ ಅವರು ವರದಿಗಾರರಿಗೆ ತಿಳಿಸಿದರು.
|