ಮುಂಬೈ ದಾಳಿಕೋರರಲ್ಲಿ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ನ ಭೇಟಿಗೆ ಆತನ ತಾಯಿ ಆಗಮಿಸಬಹುದು ಎಂಬುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಈ ಕುರಿತು ಈಗಾಗಲೇ ಕೋರಿಕೆ ಸಲ್ಲಿಸಲಾಗಿದೆಯೇ ಎಂಬ ಕುರಿತು ಸ್ಪಷ್ಟವಿಲ್ಲ. ಈ ಹಿಂದೆಯೊಮ್ಮೆ, ತಾನು ಕಸಬ್ನ ತಾಯಿಯೆಂದು ಹೇಳಿಕೊಂಡ ಗಜಿಯಾಬಾದ್ನ ಹಿಂದೂ ಮಹಿಳೆಯೊಬ್ಬಳು, ಆತನ ಭೇಟಿ ಬಯಸಿದ್ದರೂ ಅದನ್ನು ತಳ್ಳಿಹಾಕಲಾಗಿತ್ತು ಎಂಬುದಾಗಿ ಮುಂಬೈ ಪೊಲೀಸರು ಇತ್ತೀಚೆಗೆ ತಿಳಿಸಿದ್ದರು.
ಮುಂಬೈ ದಾಳಿ ಕುರಿತು ಪಾಕಿಸ್ತಾನವು ಇನ್ನಷ್ಟು ಮಾಹಿತಿ ಕೋರಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಭಾರತವು ಈಗಾಗಲೇ ಸಾಕಷ್ಟು ಮಾಹಿತಿ ನೀಡಲಾಗಿದ್ದು, ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಹೇಳಿದೆ.
ಕೆಲವು ವಾಸ್ತವಗಳನ್ನು ತಳ್ಳಿ ಹಾಕುವಂತಿಲ್ಲ. ಒಬ್ಬ ಭಯೋತ್ಪಾದಕನನ್ನು ಜೀವಂತ ಸೆರೆಹಿಡಿಯಲಾಗಿದೆ ಮತ್ತು ಕಸಬ್ನ ತಾಯಿ ಆತನನ್ನು ಭೇಟಿ ಮಾಡಲು ಇಚ್ಚಿಸುತ್ತಾರೆ. ಇವುಗಳು ವಾಸ್ತವಗಳು. ಈ ಸಂಗತಿಗಳಿಂದ ಯಾರಾದರೂ ನುಣುಚಿಕೊಳ್ಳಲು ಮತ್ತು ತಪ್ಪಿಸಿಕೊಳ್ಳಲು ಬಯಸಿದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಣಬ್ ನುಡಿದರು.
ಇಂದಿನಿಂದ ವಿಚಾರಣೆ: ಮುಂಬೈ ದಾಳಿ ಪ್ರಕಣದ ವಿಚಾರಣೆ ಬುಧವಾರ ನಡೆಯಲಿದ್ದು, ಕಸಬ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. |