ಪ್ರಥಮ ಹಂತದ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಇರುವಂತೆ ನಕ್ಸಲರು ಬಿಹಾರ ಮತ್ತು ಜಾರ್ಖಂಡ್ನಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ 16 ನಕ್ಸಲರು ಸೇರಿದಂತೆ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ.
ಜಾರ್ಖಂಡಿನ ಲಥೇರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕರೆದೊಯತ್ತಿದ್ದ ಬಸ್ಸಿನ ಮೇಲೆ ನಕ್ಸರಲು ಹೊಂಚು ದಾಳಿ ನಡೆಸಿದ್ದು, ಪರಿಣಾಮ ಐವರು ನಕ್ಸಲರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಪ್ರಥಮ ಹಂತದ ಚುನಾವಣೆಗೆ ಒಂದು ದಿನಕ್ಕೆ ಮುಂಚಿತವಾಗಿ ಈ ದುರ್ಘಟನೆ ನಡೆಸಲಾಗಿದೆ.
ಸುಮಾರು 80 ಸಿಬ್ಬಂದಿಗಳನ್ನೊಳಗೊಂಡಿದ್ದ ಬಸ್ಸಿನ ಮೇಲೆ ರಾಂಚಿಯಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ನಿಮಿಯಾದ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಹೊಂಚುದಾಳಿ ನಡೆಸಲಾಗಿದೆ.
ಮೊದಲಿಗೆ ಅವರು ನೆಲಬಾಂಬುಗಳನ್ನು ಸಿಡಿಸಿ ಬಳಿಕ ಭದ್ರತಾ ಸಿಬ್ಬಂದಿಗಳನ್ನು ಹೊತ್ತಿದ್ದ ಬಸ್ಸಿನ ಮೇಲೆ ಯದ್ವಾತದ್ವಾ ಗುಂಡು ಹಾರಿಸಲಾರಂಭಿಸಿದರು. ಪ್ರತಿಯಾಗಿ ಭದ್ರತಾ ಸಿಬ್ಬಂದಿಗಳೂ ಗುಂಡು ಹಾರಿಸಿದರು.
"ಗುಂಡಿನ ಚಕಮಕಿಯಲ್ಲಿ ಬಸ್ಸಿನ ಚಾಲಕ ಸ್ಥಳದಲ್ಲೇ ಮೃತರಾಗಿದ್ದರೆ, ಗಂಭೀರ ಗಾಯಗೊಂಡಿದ್ದ ಸಿಬ್ಬಂದಿಯೋರ್ವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತರಾಗಿದ್ದಾರೆ. ಮಾವೋವಾದಿ ಬಂಡುಕೋರರ ಐದು ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ವಕ್ತಾರ ಎಲ್.ಎನ್. ಪ್ರಧಾನ್ ಅವರು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ನಾಲ್ವರು ಸಿಬ್ಬಂದಿಗಳು ಗಾಯಗೊಂಡಿದ್ದು, ಅವರನ್ನು ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಿಎಸ್ಎಫ್ ಶಿಬಿರದ ಮೇಲೆ ದಾಳಿ ಇದೇ ವೇಳೆ ಮಧ್ಯರಾತ್ರಿಯಲ್ಲಿ ಬಿಹಾರದ ರೊಹ್ಟಾಸ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಶಿಬಿರದ ಮೇಲೆಯೂ ನಕ್ಸಲ್ ದಾಳಿ ನಡೆದಿದೆ. ಈ ವೇಳೆ ಬಿಎಸ್ಎಫ್ ಜವಾನರು 11 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಈ ವೇಳೆ ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸುಮಾರು ಎಂಟು ಗಂಟೆಗಳ ಸುದೀರ್ಘ ಕಾಲ ನಡೆದ ಗುಂಡಿನ ಚಕಮಕಿಯು ಬುಧವಾರ ನಸುಕಿನ ತನಕ ಮುಂದುವರಿಯಿತು.
ನಕ್ಸಲರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ.
ರೋಹ್ಟಾಸ್ ಕೋಟೆ ಪ್ರದೇಶದ ಶಿಬಿರದಲ್ಲಿ 70ಜವಾನರು ಶಿಬಿರ ಹೂಡಿದ್ದರು. ಇವರ ಮೇಲೆ ನಕ್ಸಲರು ಗುಂಡು ಹಾರಾಟ ನಡೆಸಿದ್ದಾರೆ. ಚುನಾವಣೆಗೆ ಒಂದು ದಿವಸ ಇರುವಂತೆಯೇ ಈ ಎರಡು ದಾಳಿಗಳು ಸಂಭವಿಸಿವೆ.
|