ಮುಂಬೈದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಪರ ಪ್ರತಿನಿಧಿಸಲು ನೇಮಿಸಲಾಗಿದ್ದ ವಕೀಲೆ ಅಂಜಲಿ ವಾಘ್ಮೋರೆ ಅವರನ್ನು ನ್ಯಾಯಾಲಯ ಪದಚ್ಯುತ ಗೊಳಿಸಿದೆ. ವೃತ್ತಿಧರ್ಮಕ್ಕೆ ಚ್ಯುತಿ ತಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ.
ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ನೇತೃತ್ವದ ವಿಶೇಷ ನ್ಯಾಯಾಲಯವು ಅಂಜಲಿಯವರ ನೇಮಕವನ್ನು ವಜಾಗೊಳಿಸಿದೆ. ಕಸಬ್ ಪರ ಇನ್ನೋರ್ವ ವಕೀಲರನ್ನೂ ನೇಮಿಸಿರುವ ಕಾರಣ ಅಂಜಲಿ ಪದಚ್ಯುತಿಯಿಂದ ಕಸಬ್ ವಿಚಾರಣೆಗೆ ಯಾವುದೇ ಅಡ್ಡಿಯಾಗದು ಎಂದು ವರದಿಗಳು ತಿಳಿಸಿವೆ.
ವಾಘ್ಮೋರೆ ಅವರು ಕಸಬ್ ಪರ ವಕೀಲರಾಗಿ ನೇಮಕವನ್ನು ಸ್ವೀಕರಿಸುವ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿಯ ಪರವಾಗಿ ವಕಾಲತ್ನಾಮ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಕೀಲ ಕೆ.ಬಿ.ಎನ್. ಲಾಮ್ ಎಂಬವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದು, "ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಿಪಶುವಾಗಿರುವ ಹರಿಶ್ಚಂದ್ರ ಶ್ರೀವರ್ಧಂಕರ್ ಎಂಬವರು ನವೆಂಬರ್ 26ರಂದು ದಾಳಿ ನಡೆದ ವೇಳೆ ಕಾಮಾ ಆಸ್ಪತ್ರೆಯಲ್ಲಿ ಗಾಯಗೊಂಡಿದ್ದು, ಇವರು ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಸರ್ಕಾರದಿಂದ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಪರಿಹಾರ ಒದಗಿಸಲು ಸಹಾಯಮಾಡುವ ನಿಟ್ಟಿನಲ್ಲಿ ಅಂಜಲಿ ವಕಾಲತ್ನಾಮಾಗೆ ಸಹಿಹಾಕಿದ್ದು, ಈ ವಿಚಾರವನ್ನು ಮರೆ ಮಾಚಿದ್ದಾರೆ" ಎಂದು ಲಾಮಾ ಆರೋಪಿಸಿದ್ದಾರೆ.
ಅಂಜಲಿ ಅವರು ಶ್ರೀವರ್ಧಂಕರ್ ಅವರಿಗೆ ಕಾನೂನು ಸಲಹೆಗಳನ್ನು ನೀಡಿದ್ದಾರೆಂದು ದೂರಲಾಗಿದೆ. ಅವರು ಇಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆನ್ನಲಾಗಿದೆ.
ಇದೇ ಪ್ರಕರಣದಲ್ಲಿ ಸಾಕ್ಷಿಯಾಗಿರುವ ವ್ಯಕ್ತಿಯ ಪರವಾಗಿ ಪ್ರತಿನಿಧ್ಯವಹಿಸಲು ನಿರ್ಧರಿಸಿದ್ದರೆ, ಕಸಬ್ ಪರವಾಗಿಯೂ ಅಂಜಲಿ ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
|