ಇಲ್ಲಿನ ಇಂಡಿಯಾ ಇಂಟರ್ನ್ಯಾಶನಲ್ ಸೆಂಟರ್ನಲ್ಲಿ ನಡೆದ ಭಾರತ-ಪಾಕಿಸ್ತಾನಿ ಪತ್ರಕರ್ತರ ಸಮ್ಮೇಳನಕ್ಕೆ ಶ್ರೀರಾಮ ಸೇನೆಯು ಅಡ್ಡಿಯುಂಟು ಮಾಡಿದೆ. ಪಾಕಿಸ್ತಾನಿ ವಿರೋಧಿ ಘೋಷಣೆಗಳನ್ನು ಕೂಗಿದ, ಸೇನಾ ಕಾರ್ಯಕರ್ತರು ಸಮ್ಮೇಳ ಸ್ಥಳಕ್ಕೆ ಮುತ್ತಿಗೆ ಹಾಕಿದರು.
ಐಐಸಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆಗಮಿಸಿದ ಸುಮಾರು ಹತ್ತರಿಂದ ಹನ್ನೆರಡು ಸೇನಾ ಕಾರ್ಯಕರ್ತರು ಸಭಾಂಗಣಕ್ಕೆ ನುಗ್ಗಿದರು. ಈ ವೇಳೆಗೆ ಪಾಕಿಸ್ತಾನದ ಹಿರಿಯ ಪತ್ರಕರ್ತರಲ್ಲೊಬ್ಬರು, ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಭಾರತವು ಏನು ಮಾಡಬೇಕು ಎಂಬ ವಿಚಾರದ ಕುರಿತು ಮಾತನಾಡುತ್ತಿದ್ದರು.
ಸೇನಾ ಕಾರ್ಯಕರ್ತರು ಭಾಷಣಕಾರರಿಗೆ ಅಡ್ಡಿಯುಂಟುಮಾಡಿದರಲ್ಲದೆ, ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿದರು. ಅಲ್ಲದೆ ಅಲ್ಲಿ ನೆರೆದಿದ್ದ ಕೆಲವು ಪತ್ರಕರ್ತರೊಂದಿಗೆ ನೂಕುನುಗ್ಗಾಟ ನಡೆಸಿದರು.
ಪತ್ರಕರ್ತರು ಒಟ್ಟು ಸೇರಿ ಇವರನ್ನು ಸಭಾಂಗಣದಿಂದ ಹೊರ ಹಾಕಿದರು. ಇಬ್ಬರನ್ನು ಪತ್ರಕರ್ತರು ಹಿಡಿದು ನಿಲ್ಲಿಸಲು ಸಫಲರಾದಲ್ಲಿ ಉಳಿದ ಕಾರ್ಯಕರ್ತರು ತಪ್ಪಿಸಿಕೊಂಡಿದ್ದಾರೆ.
ತಕ್ಷಣವೇ ಪೊಲೀಸರನ್ನು ಕರೆಸಲಾಗಿದ್ದು ಅವರೀಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. |