ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ. ದೇಶ ಇಂದು ಕವಲು ದಾರಿಯಲ್ಲಿ ನಿಂತಿದೆ. ನವದೆಹಲಿಯಲ್ಲಿ ಅವರು ಮಾಧ್ಯಮಗಳಿಗೆ ತಮ್ಮ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದ್ದು, ಕಳೆದೈದು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಹಾಗೂ ಭದ್ರತೆಯನ್ನು ಯುಪಿಎ ಸರ್ಕಾರ ಮೂಲೆಗುಂಪು ಮಾಡಿದೆ. ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಅಡ್ವಾಣಿಯಂಥ ನಾಯಕರ ಅಗತ್ಯ ರಾಷ್ಟ್ರಕ್ಕಿದೆ ಎಂದು ಹೇಳಿದ್ದಾರೆ. ರಾಷ್ಟ್ರವಿಂದು ಮೂರು ಕವಲು ದಾರಿಯಲ್ಲಿ ನಿಂತಿದೆ ಎಂದು ವಿಶ್ಲೇಷಿಸಿರುವ ಅವರು ಒಂದು ರಸ್ತೆ ಕಳೆದ ಐದು ವರ್ಷಗಲಲ್ಲಿ ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಯುಪಿಎಯತ್ತ, ಇನ್ನೊಂದು ರಸ್ತೆ ಯಾವುದಾದರೂ ರೀತಿಯಿಂದ ಅಧಿಕಾರ ಹಿಡಿಯಲು ಹೊರಟಿರುವ ಪಕ್ಷಗಳ ಒಕ್ಕೂಟದತ್ತ ಹಾಗೂ ಇನ್ನೊಂದು ರಸ್ತೆ ರಾಜಕೀಯ ಸ್ಥಿರತೆ, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಭದ್ರತೆ ಒದಗಿಸುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದತ್ತೆ ಹೋಗುತ್ತದೆ. ತನ್ನ ಆರು ವರ್ಷಗಳ ಅವಧಿಯಲ್ಲಿ ಈ ಅಂಶವನ್ನು ಎನ್ಡಿಎ ಸಾಬೀತುಪಡಿಸಿದೆ ಎಂದು ವಾಜಪೇಯಿ ಹೇಳಿದ್ದಾರೆ. ಭಾರತೀಯ ರಾಜಕೀಯದಲ್ಲಿ ಆಡ್ವಾಣಿಯವರಿಗೆ ವಿಶಿಷ್ಟ ಸ್ಥಾನವಿದೆ ಎಂದು ನುಡಿದ ಅಟಲ್, ತಾನು ಮತ್ತು ಅವರು 1952ರಿಂದ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ, ಅವರ ಬುದ್ಧಿ ಮತ್ತೆ, ಸ್ಪಷ್ಟವಿಚಾರ ಹಾಗೂ ಎಲ್ಲರನ್ನೂ ಸಂಘಟಿತರಾಗಿಸಿ ಜತೆಯಲ್ಲಿ ಕರೆದೊಯ್ಯುವ ಸಾಮರ್ಥ್ಯದಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಹಾಡಿಹೊಗಳಿದ್ದಾರೆ. |