ಹಲವಾರು ಮಂದಿ ಅಮಾಯಕರನ್ನು ಗುಂಡಿಕ್ಕಿ ಕೊಂದಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಾದಿಸಲು ಮುಂದಾಗಿರುವ ವಕೀಲ ಅಬ್ಬಾಸ್ ಖಾಜ್ಮಿ ಅವರನ್ನು ಪ್ರತಿಷ್ಠಿತ ಇಸ್ಲಾಂ ಜಿಂಖಾನದ ಧರ್ಮದರ್ಶಿತ್ವದಿಂದ ತೆಗೆದು ಹಾಕಲಾಗಿದೆ. ಶಿಯಾ ಮುಸ್ಲಿಂ ಸಂಘಟನೆಯು ಅಬ್ಬಾಸ್ ಅವರು ಕಸಬ್ ಪರ ವಾದಿಸಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಹಿಂತೆಗೆಯುವಂತೆ ಒತ್ತಾಯಿಸಿತ್ತು.ಇಸ್ಲಾಂ ಜಿಂಖಾನಕ್ಕೆ ಅಬ್ಬಾಸ್ ಅವರನ್ನು ಧರ್ಮದರ್ಶಿಯಾಗಿ ನೇಮಿಸಲಾಗಿತ್ತು. ಆದರೆ ಉಗ್ರನ ಪರವಾಗಿ ವಾದಿಸುವುದು ಇಸ್ಲಾಂ ವಿರೋಧಿ ಕಾರ್ಯ ಎಂಬ ಹಿನ್ನೆಲೆಯಲ್ಲಿ ಅಬ್ಬಾಸ್ ನೇಮಕವನ್ನು ತೆಗೆದು ಹಾಕಲು ಜಿಂಖಾನ ಮುಂದಾಗಿದೆ.ಕೆಲವು ದಿನಗಳ ಹಿಂದೆ ಮುಸ್ಲಿಂ ಉಲೇಮಾಗಳು, ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು, ಕಸಬ್ನನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ಮುಂದಾಗಿರುವ ಅಬ್ಬಾಸ್ ಕ್ರಮವನ್ನು ಖಂಡಿಸಿದ್ದರು. "ತನ್ನನ್ನು ಶಿಯಾ ಸಮುದಾಯದ ಸದಸ್ಯ ಎಂದು ಕರೆದುಕೊಂಡಿರುವ ಖಾಜ್ಮಿ, ತಾನೊಬ್ಬ ಶಿಯಾ ಮುಖಂಡನೆಂಬ ಛಾಪು ಮೂಡಿಸಿದ್ದಾರೆ" ಎಂದು ದೂರಿದ್ದರು.ಜಿಂಖಾನವು ಅಬ್ಬಾಸ್ ಅವರಿಗೆ ಪತ್ರ ಒಂದನ್ನು ಬರೆದು, "ನೀವು ಅತ್ಯಂತ ನೀಚಕಾರ್ಯ ಮಾಡಿರುವ ಉಗ್ರ ಕಸಬ್ ಪರ ವಾದಿಸಲು ಒಪ್ಪಿದ್ದೀರಿ. ಇದು ಇಸ್ಲಾಂ ವಿರೋಧಿಯಾಗಿದೆ. ಇಸ್ಲಾಂನಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಮತ್ತು ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳಲೂ ಅವಕಾಶವಿಲ್ಲ. ಜಿಂಖಾನದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿಮ್ಮ ಧರ್ಮದರ್ಶಿತ್ವವನ್ನು ವಜಾಮಾಡಲಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.ಆದರೆ, ಜಿಂಖಾನದ ನಿರ್ಧಾರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅಬ್ಬಾಸ್, ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. "ಇದು ಮುಸ್ಲಿಂ ಮಂಡಳಿಯಲ್ಲ, ಬದಲಿಗೆ ಇದು ವ್ಯಕ್ತಿಗಳ ಸಂಘಟನೆಯಾಗಿದೆ. ಕಸಬ್ ಪರ ವಾದಿಸುವುದು ಇಸ್ಲಾಂ ವಿರೋಧಿ ಎಂಬುದಾಗಿ ಅವರು ಹೇಗೆ ಹೇಳಲು ಸಾಧ್ಯ" ಎಂದು ಪ್ರಶ್ನಿಸಿದ್ದಾರೆ.ಅಲ್ಲದೆ, ತಾನು ಈ ಕಾರ್ಯಕ್ಕೆ ಮುಂದಾಗಿರುವುದು ತನ್ನ ವೃತ್ತಿಯಾಗಿದೆ. ನ್ಯಾಯಾಲಯದ ನಿರ್ದೇಶನದ ಮೇಲೆ ತಾನು ಕಸಬ್ ಪ್ರಕರಣ ವಹಿಸಿಕೊಂಡಿರುವುದಾಗಿ ಹೇಳಿರುವ ಅಬ್ಬಾಸ್, ಜಿಂಖಾನದ ಅಧ್ಯಕ್ಷರು ಮತ್ತು ಮಂಡಳಿಯ ಸದಸ್ಯರೊಂದಿಗೆ ತನಗೆ ಭಿನ್ನಾಭಿಪ್ರಾಯವಿದ್ದು, ತಾನು ಅವರ ಕುರಿತು ಬಹಿರಂಗ ಹೇಳಿಕೆ ನೀಡಿರುವ ಕಾರಣ ತನ್ನ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ. |