ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕಾಲವಾಗಿ ಇಂದಿಗೆ 18 ವರ್ಷಗಳು ಸಲ್ಲುತ್ತಿದ್ದು, ರಾಷ್ಟ್ರಾದ್ಯಂತ ಅವರ ಪುಣ್ಯತಿಥಿ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜೀವ್ ಪತ್ನಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಗಳು ಮುಂಜಾನೆ ವೀರ ಭೂಮಿಗೆ ತೆರಳಿ ಪುಷ್ಪಾಂಜಲಿ ಸಲ್ಲಿಸಿದರು.
ರಾಜೀವ್ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ರಾಜೀವ್ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ಆಕೆಯ ಪತಿ ರಾಬರ್ಟ್ ವಾದ್ರ ಹಾಜರಿದ್ದರು. ರಾಜೀವ್ ಗಾಂಧಿ ಅವರ ಸಮಾಧಿ ಸ್ಥಳವನ್ನು ನೂರಾರು ಶ್ವೇತಬಣ್ಣದ ತಾವರೆಗಳಿಂದ ಅಲಂಕರಿಸಲಾಗಿದೆ.
ಇವರಲ್ಲದೆ, ರಕ್ಷಣಾ ಸಚಿವ ಎ.ಕೆ. ಆಂಟನಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ನ್ಯಾಶನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ.ಎಂ. ಮಣಿ ಹಾಗೂ ಹಲವಾರು ಹೊಸದಾಗಿ ಆಯ್ಕೆಯಾಗಿರುವ ಸಂಸದರು ಪುಷ್ಪಾಂಜಲಿ ಸಲ್ಲಿಸಿದರು.
ರಾಜೀವ್ ಅವರು ಎಲ್ಟಿಟಿಇ ಆತ್ಮಾಹುತಿ ದಾಳಿಗೆ ಬಲಿಯಾಗಿ 18 ವರ್ಷಗಳು ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವು 18 ಮಕ್ಕಳ ಪ್ರವೇಶದ ಮೂಲಕ ಆರಂಭಗೊಂಡಿತು.
ರಾಜೀವ್ ಗಾಂಧಿ ಅವರು 1991ರ ಮೇ 21ರಂದು ರಾತ್ರಿ ತಮಿಳ್ನಾಡಿನ ಚೆನ್ನೈನ ಶ್ರೀಪೆರಂಬದೂರು ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು. |