ಶ್ರೀಲಂಕಾದ ಯುದ್ಧ ಜರ್ಜರಿತ ಮಂದಿಗೆ ನೆಮ್ಮದಿ ಹಾಗೂ ಸಹಾಯ ಒದಗಿಸುವ ನಿಟ್ಟಿನಲ್ಲಿ ಭಾರತವು ಶುಕ್ರವಾರ ವೈದ್ಯಕೀಯ ತಂಡ ಒಂದನ್ನು ಶ್ರೀಲಂಕಾಗೆ ರವಾನಿಸಿದೆ. ಈ ತಂಡವು ತಮಿಳು ಬಾಹುಳ್ಯದ ಉತ್ತರ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಲಿದೆ.
ಎಲ್ಟಿಟಿಇ ಹಾಗೂ ಸೇನೆಯ ನಡುವಿನ ಯುದ್ಧದಿಂದಾಗಿ ಬಳಲಿರುವ ನಾಗರಿಕರ ಚಿಕಿತ್ಸೆಗಾಗಿ 8 ವೈದ್ಯರನ್ನೊಳಗೊಂಡಿರುವ 27 ಮಂದಿಯ ವೈದ್ಯಕೀಯ ತಂಡ ಹಾಗೂ 25 ಟನ್ಗಳಿಗೂ ಅಧಿಕ ಪರಿಹಾರ ಸಾಧನಗಳನ್ನು ರವಾನಿಸಿರುವುದಾಗಿ ಬ್ರಿಗೇಡಿಯರ್ ಸಚ್ದೇವ್ ಅವರು ತಿಳಿಸಿದ್ದಾರೆ. ಆಂತರಿಕವಾಗಿ ಸ್ಥಳಾಂತರಗೊಂಡಿರುವ ಜನರಿಗೆ ವಾವುನಿಯಾವು ಸಮೀಪವಿರುವ ಕಾರಣ ತಮ್ಮ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರಿಸಲು ಶ್ರೀಲಂಕಾವು ವಿನಂತಿಸಿದೆ ಎಂದು ಅವರು ಹೇಳಿದ್ದಾರೆ.
ಪಾಲಂ ವಾಯು ನೆಲೆಯಿಂದ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನ ಐಎಲ್ 76 ಮುಂಜಾನೆ 9.30ರ ವೇಳೆಗೆ ವಿಂಗ್ ಕಮಾಂಡರ್ ಎಚ್.ಪಿ. ಕುಮಾರ್ ಅವರ ನೇತೃತ್ವದಲ್ಲಿ ಲಂಕಾದತ್ತ ಪ್ರಯಾಣ ಬೆಳೆಸಿದೆ.
ವೈದ್ಯಕೀಯ ತಂಡದಲ್ಲಿ ಸರ್ಜನ್, ಫಿಜೀಶಿಯನ್, ಅರಿವಳಿಕೆ ತಜ್ಞರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಪಡೆ ಸೇರಿದೆ. ಇದೀಗಾಗಲೆ ಶ್ರೀಲಂಕಾದಲ್ಲಿ ಸುಮಾರು ಎರಡು ಡಜನ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ನವೆಂಬರ್ 2008ರಿಂದೀಚೆಗೆ ಭಾರತವು ಸುಮಾರು 1.7ಲಕ್ಷಕ್ಕೂ ಅಧಿಕ ಕುಟುಂಬಕ್ಕಾಗುವಷ್ಟು ಪರಿಹಾರ ಮೂಟೆಗಳನ್ನು ಯದ್ಧದಿಂದಾಗಿ ಸ್ಥಳಾಂತರಗೊಂಡಿರುವ ತಮಿಳರಿಗಾಗಿ ರವಾನಿಸಿದೆ. |