ಜಾಗತಿಕವಾಗಿ ಹರಡುತ್ತಿರುವ ಹಂದಿಜ್ವರ ಸೋಂಕು ತಡೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿರುವ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್, ದೇಶಾದ್ಯಂತ ಮತ್ತೆ 16 ಲ್ಯಾಬೋರೇಟರಿಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲೂ ಹಂದಿಜ್ವರದ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಸಚಿವ ಆಜಾದ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್1ಎನ್1 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು. ಅಲ್ಲದೇ ಎಲ್ಲಾ 21 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಮೆರಿಕ, ಮೆಕ್ಸಿಕೋ, ದುಬೈ, ಕೆನಡಾದಿಂದ ಆಗಮಿಸುವ ಪ್ರಯಾಣಕರ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಜಾಗತಿಕವಾಗಿ ಹರಡುತ್ತಿರುವ ಹಂದಿಜ್ವರದ ಪ್ರಕರಣದಿಂದಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಆಜಾದ್, ದೇಶಾದ್ಯಂತ ಮತ್ತೆ 16 ಲ್ಯಾಬೋರೇಟರಿಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಎಚ್1ಎನ್1 ಸೋಂಕು ಪತ್ತೆಗಾಗಿ ಲ್ಯಾಬ್ ಪರಿಣತರು ಮತ್ತು ವೈದ್ಯರಿಗೆ ವಾರದೊಳಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ಸೋಂಕು ಪತ್ತೆ: ಮೇ 31ರಂದು ಅಮೆರಿಕದಿಂದ ಬಂದ ಇಬ್ಬರಿಗೆ ಹಂದಿಜ್ವರದ ಸೋಂಕು ಇರುವುದು ಪತ್ತೆಯಾಗಿದ್ದು, ಇದರಿಂದ ಈ ಸೋಂಕಿಗೆ ತುತ್ತಾದವರ ಸಂಖ್ಯೆ 10ಕ್ಕೇರಿದೆ.
ಈತನಿಗೆ ಸಹ ಪ್ರಯಾಣಿಕರಿಂದ ಈ ಸೋಂಕು ಬಂದಿರಬೇಕೆಂದು ಶಂಕಿಸಲಾಗಿದೆ. ಮೇ 31ರಂದು ಈತ ಹಂದಿ ಜ್ವರದ ಸೋಂಕಿರುವ ಬಗ್ಗೆ ಬ್ರಿಟಿಷ್ ಏರ್ವೇಸ್ ಖಚಿತಪಡಿಸಿತ್ತು ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಜೂನ್ 2ರಂದು ನ್ಯೂಯಾರ್ಕ್ನಿಂದ ಆಗಮಿಸಿರುವ ವ್ಯಕ್ತಿಗೂ ಹಂದಿಜ್ವರದ ಸೋಂಕು ಇರುವುದು ಖಚಿತವಾಗಿದೆ.
|