ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ್ ಸೇನೆ (ಎಂಎನ್ಎಸ್) ವರಿಷ್ಠ ರಾಜ್ ಠಾಕ್ರೆ ಸೋಮವಾರ ಕಲ್ಯಾಣ್ ಕೋರ್ಟ್ಗೆ ಶರಣಾಗಿದ್ದು, ಠಾಕ್ರೆಯನ್ನು ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ತರುವಾಯವೇ, ಒಂದು ಲಕ್ಷ ರೂ.ವೈಯಕ್ತಿಕ ಭದ್ರತೆ ಆಧಾರದ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಿದೆ.ಇಂದು ಬೆಳಿಗ್ಗೆ ಕಲ್ಯಾಣ್ ಕೋರ್ಟ್ಗೆ ಹಾಜರಾಗಿದ್ದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೆಲ ಹೊತ್ತಿನಲ್ಲಿಯೇ, ರಾಜ್ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ 1ಲಕ್ಷ ರೂ.ಭದ್ರತೆಯೊಂದಿಗೆ ಜಾಮೀನು ನೀಡಿತು.2008 ರ ಅಕ್ಟೋಬರ್ನಲ್ಲಿ ರೈಲ್ವೆ ನೇಮಕಾತಿಗಾಗಿ ನಡೆದ ಪರೀಕ್ಷೆಗೆ ಆಗಮಿಸಿದ್ದ ಉತ್ತರ ಭಾರತೀಯರ ಮೇಲೆ ಎಂಎನ್ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮುಂಬೈ ಹೈಕೋರ್ಟ್ ಅದನ್ನು ತಿರಸ್ಕರಿಸಿ, ಮೊದಲು ಕಲ್ಯಾಣ್ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿತ್ತು.ಆ ನಿಟ್ಟಿನಲ್ಲಿ ರಾಜ್ ಠಾಕ್ರೆ ಕಲ್ಯಾಣ್ ಕೋರ್ಟ್ಗೆ ಶರಣಾದ ಸಂದರ್ಭದಲ್ಲಿ ಕಲ್ಯಾಣ್ ರೈಲ್ವೆ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಎಂಎನ್ಎಸ್ ಕಾರ್ಯಕರ್ತರು ಕೋರ್ಟ್ ಹೊರಭಾಗದಲ್ಲಿ ಜಮಾಯಿಸಿದ್ದರು. ಮುನ್ನೆಚ್ಚರಿಕೆ ಅಂಗವಾಗಿ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಾಮೀನು ಪಡೆದು ಹೊರಬಂದ ಠಾಕ್ರೆಯನ್ನು ಬೆಂಬಲಿಗರು ಹರ್ಷೋದ್ಘಾರದ ಮೂಲಕ ಸ್ವಾಗತಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 16ರಂದು ಕಲ್ಯಾಣ್ ಕೋರ್ಟ್ ರಾಜ್ ಠಾಕ್ರೆಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಅಲ್ಲದೇ ಜೂನ್ ಅಂತ್ಯದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು. ಆದರೆ ಕೆಳ ನ್ಯಾಯಾಲಯ ಠಾಕ್ರೆಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಕಳೆದ ವರ್ಷ ರೈಲ್ವೆ ನೇಮಕಾತಿ ಪರೀಕ್ಷೆಗಾಗಿ ಆಗಮಿಸಿದ್ದ ಉತ್ತರ ಭಾರತೀಯರ ಮೇಲೆ ಎಂಎನ್ಎಸ್ ಕಾರ್ಯಕರ್ತರು ತೀವ್ರ ಹಲ್ಲೆ ನಡೆಸಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. |