ಜಮ್ಮು-ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸೈನಿಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಜ್ ಗಡಿಯಲ್ಲಿ ಮತ್ತೆ ಪಾಕ್ ಕದನ ವಿರಾಮವನ್ನು ಉಲ್ಲಂಘಿಸಿ, ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಭಾರತದ ಸೈನಿಕ ಮೊಹೀಂದರ್ ಸಿಂಗ್ ಸಾವನ್ನಪ್ಪಿದ್ದು, ಮತ್ತೊಬ್ಬ ಸೈನಿಕ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಸಂಜೆ ಭಾರತೀಯ ಗಡಿಭಾಗದಿಂದ ಅಕ್ರಮವಾಗಿ ನುಸುಳಲು ಯತ್ನಿಸಿದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದ್ದು, ಪಾಕ್ ಆರ್ಮಿ ಕೂಡ ಪ್ರತಿದಾಳಿ ನಡೆಸಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ. ಪದೇ ಪದೇ ಭಾರತ ಮತ್ತು ಪಾಕ್ ಗಡಿಯಲ್ಲಿ ಪಾಕ್ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪಾಕಿಸ್ತಾನದಿಂದ ವಿವರಣೆ ಕೇಳಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನ ಮೂರನೇ ಬಾರಿಗೆ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವುದಾಗಿ ಆರ್ಮಿ ಅಧಿಕಾರಿಗಳು ವಿವರಿಸಿದ್ದು, ಗಡಿಭಾಗದಲ್ಲಿ ಬಿಗಿ ಭದ್ರತೆಯೊಂದಿಗೆ ಕಾವಲು ಕಾಯಲಾಗುತ್ತಿದೆ ಎಂದು ತಿಳಿಸಿದರು. |