ಮಾಯಾವತಿ ರಾಜ್ಯಾದ್ಯಂತ ಪ್ರತಿಮೆಗಳನ್ನು ಅನಾವರಣ ಮಾಡಿರುವ ಸಂಗತಿ ನಾಚಿಕೆಗೇಡಿನ ವಿಷಯವೆಂದು ಗೃಹಸಚಿವ ಚಿದಂಬರಂ ಕಿಡಿಕಾರಿದ್ದಾರೆ. ಪ್ರತಿಮೆಗಳಿಗೆ ಖರ್ಚು ಮಾಡಿದ ಹಣವನ್ನು ಹೆಚ್ಚು ಉತ್ಪಾದಕವಾಗಿ ಖರ್ಚು ಮಾಡಬಹುದಿತ್ತೆಂದು ಅವರು ಖಾರವಾಗಿ ಹೇಳಿದ್ದಾರೆ. ಮಾಯಾವತಿ ಕೇವಲ ಒಂದು ದಿನದಲ್ಲೇ 15 ಪ್ರತಿಮೆಗಳ ಅನಾವರಣ ಮಾಡಿದ್ದಲ್ಲದೇ ತಮಗೆ ಮತ್ತು ದಲಿತ ಕಣ್ಮಣಿಗಳ ಗೌರವಾರ್ಥ ಕೆಲವು ವರ್ಷಗಳಿಂದ ಬೃಹತ್ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.
ಮಾಯಾವತಿ ಪ್ರತಿಮೆ ನಿರ್ಮಾಣದಿಂದ ಉದ್ಭವಿಸಿದ ವಿವಾದ ಇಲ್ಲಿಗೇ ಮುಗಿಯಲಿಲ್ಲ.ಅವರು ಆತುರಾತುರವಾಗಿ ನಿರ್ಮಿಸಿದ ಪ್ರತಿಮೆಗಳು ಸೋಮವಾರ ಸುಪ್ರೀಂಕೋರ್ಟ್ ಪರಿಶೀಲನೆಗೆ ಬರಲಿದೆ. ಮಾಯಾವತಿ ಮತ್ತು ಅವರ ಪಕ್ಷದ ಚಿಹ್ನೆಯಾದ ಆನೆಯ ಮತ್ತಷ್ಟು ಪ್ರತಿಮೆಗಳ ನಿರ್ಮಾಣಕ್ಕೆ ತಡೆ ವಿಧಿಸುವಂತೆ ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮಾಯಾವತಿ ತಮ್ಮ ಪ್ರತಿಮೆಗಳು ಮತ್ತು ಪಕ್ಷದ ಚಿಹ್ನೆಯಾದ ಆನೆಯ ಗುರುತಿನ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ಹಣದ ದುರ್ಬಳಕೆ ಮಾಡಿದ್ದಾರೆಂದು ಅರ್ಜಿ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿ 60 ಆನೆಯ ಪ್ರತಿಮೆಗಳ ಅಳವಡಿಕೆಯನ್ನು ಕೂಡ ಅರ್ಜಿಯಲ್ಲಿ ಪ್ರಶ್ನಿಸಲಾಗದಿದೆ. ಆನೆಯ ಪ್ರತಿಮೆಗಳಿಗೆ ರಾಜ್ಯದ ನಿಧಿಗಳಿಂದ 52.20 ಕೋಟಿ ರೂ. ಖರ್ಚಾಗುತ್ತದೆ. ಇದು ಚುನಾವಣೆ ಆಯೋಗದ ಅನೇಕ ನಿಯಮಗಳ ಉಲ್ಲಂಘನೆಯೆಂದು ವಕೀಲರು ಹೇಳಿದ್ದಾರೆ. |