ಒಮ್ಮೆ ಕ್ರಿಕೆಟಿಗ ಅನ್ನಿಸಿಕೊಂಡವನಿಗೆ ಕ್ರಿಕೆಟ್ ಹುಚ್ಚು ಬಡಪೆಟ್ಟಿಗೆ ಬಿಡಲಾರದು. ಭಾರತ ತಂಡವನ್ನು ಮುನ್ನಡೆಸಿ ಮ್ಯಾಚ್ ಫಿಕ್ಸಿಂಗ್ ಆರೋಪಗಳಿಂದಾಗಿ ಮೂಲೆಗುಂಪಾಗಿದ್ದ ಮೊಹಮದ್ ಅಜರುದ್ದೀನ್ಗೆ ಮತ್ತು ಅವರ ಜೊತೆಗೇ ತಂಡದಲ್ಲಿದ್ದ ಸಿಕ್ಸರ್ ಸಿಧು ಖ್ಯಾತಿಯ ನವಜೋತ್ ಸಿಂಗ್ ಸಿಧುಗೆ ಆಗಿದ್ದು ಕೂಡ ಅದೇ.
ಸಂಸತ್ತಿನಲ್ಲಿ ಮಂಗಳವಾರ ಚೊಚ್ಚಲ ಭಾಷಣ ಮಾಡಿದ ಕಾಂಗ್ರೆಸ್ ಸಂಸದ ಮೊಹಮದ್ ಅಜರುದ್ದೀನ್, ತನ್ನ ಭಾಷಣದಲ್ಲಿ ಸಿಕ್ಸರ್ ಬಾರಿಸುವಂತೆ ತನಗೆ ಸಹವರ್ತಿಗಳು ಒತ್ತಾಯಿಸಿದ್ದರು ಎಂಬುದನ್ನು ನೆನಪಿಸಿದರು. "ನನಗೆ ಸಿಕ್ಸರ್ ಬಾರಿಸಲು ಅಷ್ಟು ಚೆನ್ನಾಗಿ ಬರೋದಿಲ್ಲ, ಆದ್ರೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರುವ (ಬಿಜೆಪಿ ಸಂಸದ) ಸಿಧು ಚೆನ್ನಾಗಿ ಸಿಕ್ಸರ್ ಬಾರಿಸುತ್ತಾರೆ" ಎಂದು ಅಜರ್ ಹೇಳಿದಾಗ ಸದನದಲ್ಲಿ ನಗೆಯ ಸಿಕ್ಸರ್ ಸಿಡಿಯಿತು.
ಸಂಸದರಾಗಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಧನ್ಯವಾದ ಹೇಳುತ್ತಲೇ ಮಾತು ಆರಂಭಿಸಿದ ಅಜರ್, ತನ್ನ ಮೊರಾದಾಬಾದ್ ಕ್ಷೇತ್ರವು ಹಿತ್ತಾಳೆ ಉದ್ದಿಮೆಗೆ ಪ್ರಸಿದ್ಧವಾಗಿದ್ದು, ಅದರ ಉತ್ತೇಜನಕ್ಕೆ ಸಹಕಾರದ ಅಗತ್ಯವಿದೆ ಎಂದರು.
ಮಾತ್ರವಲ್ಲದೆ, ಕ್ರಿಕೆಟಿನ ಬಗ್ಗೆ ಗಮನ ಹರಿಸುತ್ತಿರುವ ಕ್ರೀಡಾ ಸಚಿವ ಎಂ.ಎಸ್.ಗಿಲ್ ಅವರನ್ನೂ ಅಭಿನಂದಿಸಿದ ಅಜರ್, ದೇಶದಲ್ಲಿ ಇತರ ಕ್ರೀಡೆಗಳಿಗೂ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು. |