ಮಾಯಾವತಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಾಗಿ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾಬಹುಗುಣ ಅವರನ್ನು ಬಂಧಿಸಿರುವ ವಿಚಾರ ಗುರುವಾರ ಉಭಯ ಸದನಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿ ಎರಡೆರಡು ಬಾರಿ ಮುಂದೂಡುವಂತೆ ಮಾಡಿತು.
ಲೋಕಸಭೆಯಲ್ಲಿ ಬಿಎಸ್ಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆಯುಂಟಾದರೆ, ರಾಜ್ಯಸಭೆಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ನಾಯಕರು ರೀಟಾ ಹೇಳಿಕೆಯು ಮಹಿಳಾ ವಿರೋಧಿಯಾಗಿದೆ ಎಂದು ಬಣ್ಣಿಸಿದ್ದು ಈ ಕುರಿತು ಹರಿಹಾಯ್ದರು.
ಲೋಕಸಭೆಯಲ್ಲಿ ಕಾಂಗ್ರೆಸ್ನ ಜಗದಂಬಿಕ ಪಾಲ್ ಹಾಗೂ ಅವರ ಪಕ್ಷದ ಸಹೋದ್ಯೋಗಿಗಳು ಈ ವಿಚಾರವನ್ನು ಎತ್ತಿದ ತಕ್ಷಣದಿಂದ ಲೋಕಸಭೆಯಲ್ಲಿ ಕೋಲಾಹಲ ಉಂಟಾಯಿತು.
ಪ್ರಚೋದನಕಾರಿ ಭಾಷಣಕ್ಕಾಗಿ ರೀಟಾ ಅವರನ್ನು ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಬಿಎಸ್ಪಿ ಸದಸ್ಯರೂ ಸಮರ್ಥಿಸುತ್ತಿದ್ದರು. |