ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾಗಿ ಇಂದಿಗೆ 43 ವರ್ಷ ಕಳೆದರೂ ಅವರ ಸಾವಿನ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಶಾಸ್ತ್ರಿ ಅವರು 1966ರಲ್ಲಿ ತಾಷ್ಕೆಂಟ್ನಲ್ಲಿ ನಿಧನರಾದಾಗ, ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತೆ?ಅದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಬಳಿ ಯಾವುದಾದರೂ ದಾಖಲೆಗಳಿವೆಯೇ?ಎಂದು ಲೇಖಕರೊಬ್ಬರು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ವಿವರ ಕೇಳಿದ್ದರು.
ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ರಷ್ಯಾದಲ್ಲಿ ನಡೆದಿಲ್ಲ ಎಂದು ದೃಢಪಡಿಸಿದೆ. ದೆಹಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ತಮ್ಮ ಉತ್ತರದಲ್ಲಿ ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಪೂರಕ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಸಿಐಎನ ಕಣ್ಣು ದಕ್ಷಿಣ ಏಷ್ಯಾ ಮೇಲೆ' ಎಂಬ ಹೆಸರಿನ ಪುಸ್ತಕದ ಲೇಖಕ ಅನೂಜ್ ಧರ್ ಶಾಸ್ತ್ರಿ ಅವರ ಸಾವಿನ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ವಯ ವಿವರ ಕೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಎಂಟು ಪ್ರಶ್ನೆಗಳನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದರು.
1966ರ ಪಾಕಿಸ್ತಾನದ ಜೊತೆಗಿನ ಯುದ್ಧದ ನಂತರ ಶಾಸ್ತ್ರಿ ಅವರು ಅಂದಿನ ಪಾಕಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್ ಅವರನ್ನು ಭೇಟಿಯಾಗಲು ತಾಷ್ಕೆಂಟ್ಗೆ ತೆರಳಿದ್ದರು. ಜನವರಿ 11, 1966ರಂದು ಅಂದರೆ, ತಾಷ್ಕೆಂಟ್ ಒಪ್ಪಂದದ ಸಂಜೆ ನಿಗೂಢವಾಗಿ ಸಾವನ್ನಪ್ಪಿದ್ದರು.
ಇದೊಂದು ಜೋಕ್: ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮರಣೋತ್ತರ ಪರೀಕ್ಷೆ ಕುರಿತು ಕೇಳಿದ ಮಾಹಿತಿ ಅರ್ಜಿಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸಚಿವಾಲಯ ಕಳುಹಿಸಿರುವ ಕ್ರಮ ವ್ಯರ್ಥ ಹಾಗೂ ಜೋಕ್ ಎಂದು ಶಾಸ್ತ್ರಿ ಪುತ್ರ ಸುನಿಲ್ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸ್ತ್ರಿ ಸಾವನ್ನಪ್ಪಿದಾಗ ಹಾಲಿ ಪ್ರಧಾನಿಯಾಗಿದ್ದರು. ಅವರ ಸಾವಿನ ಕುರಿತ ವಿವರಕ್ಕಾಗಿ ಅರ್ಜಿಯನ್ನು ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿರುವುದೇ ಒಂದು ಸಣ್ಣತನದ ವಿಷಯವಾಗಿದೆ. ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಿ ಅಥವಾ ಗೃಹ ಇಲಾಖೆ ವಿವರಣೆ ನೀಡಬೇಕಾಗಿತ್ತು ಎಂದು ಹರಿಹಾಯ್ದಿದ್ದಾರೆ.