ಎಡಪಕ್ಷಗಳೂ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ನ್ಯಾಯಾಧೀಶರ ಆಸ್ತಿ ಮಸೂದೆ ಮಂಡನೆಗೆ ಹಿನ್ನೆಡೆಯುಂಟಾಗಿದೆ. ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಬಹಿರಂಗ ಪಡಿಸದಿರಲು ಅನುಕೂಲ ಕಲ್ಪಿಸುವ ಈ ಮಸೂದೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಸಮಾತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿವೆ.
ಸಂವಿಧಾನದ 91ನೆ ವಿಧಿಯನ್ನು ಉಲ್ಲೇಖಿಸಿದ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು "ಒಂದೆಡೆ ಚುನಾವಣೆಗೆ ಸ್ಫರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಹೇಳಿದರೆ, ಇನ್ನೊಂದೆಡೆ ನ್ಯಾಯಾಧೀಶರು (ಸಾರ್ವಜನಿಕ ಕಚೇರಿಯಲ್ಲಿರುವವರು) ತಮ್ಮ ಆಸ್ತಿಯನ್ನು ಬಹಿರಂಗ ಪಡಿಸದಿರುವಂತೆ ಅನಕೂಲ ಕಲ್ಪಿಸುವುದು" ಹೀಗೆ ಎರಡು ಕಾನೂನುಗಳು ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಸಿಪಿಐ ನಾಯಕಿ ಬೃಂದಾ ಕಾರಟ್ ಅವರೂ, ನ್ಯಾಯಾಧೀಶರ ಅಸ್ತಿ ಮಸೂದೆಯು ಎಲ್ಲಾ ಪ್ರಜೆಗಳ ಸಮಾನೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನುಡಿದರು.
ತೀವ್ರ ವಾದವಿವಾದ, ಕೋಲಾಹಲದ ನಡುವೆಯೇ, ನ್ಯಾಯಾಧೀಶರ ಆಸ್ತಿಯನ್ನು ಸುಪ್ರೀಂ ಕೋರ್ಟ್ ನೇಮಿಸುವ ಆಂತರಿಕ ಯಂತ್ರದ ಮೂಲಕ ಪರಿವೀಕ್ಷಿಸಲಾಗುವುದು ಎಂದು ಸರ್ಕಾರ ಸಮರ್ಥಿಸಿಕೊಂಡಿತು. ಆದರೆ ವಿಪಕ್ಷಗಳು ಇದನ್ನು ಕೇಳಲು ಸಿದ್ಧವಿರಲಿಲ್ಲ.
ಮೇಲ್ಮನೆಯಲ್ಲಿ ಸರ್ಕಾರವು ಬಹುಮತದ ಕೊರತೆಯಿಂದಾಗಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಮಸೂದೆಯನ್ನು ಹಿಂತೆಗೆದುಕೊಂಡರು. ಬಳಿಕ ಸದನವನ್ನು ಮುಂದೂಡಲಾಯಿತು.
ನ್ಯಾಯಾಧೀಶರ (ಆಸ್ತಿ ಮತ್ತು ಬಾಧ್ಯತೆಯ ಘೋಷಣೆ) ಕಾಯ್ದೆ, 2009 ಎಂಬ ಹೆಸರಿನ ಉದ್ದೇಶ ಮಸೂದೆಯು ನ್ಯಾಯಾಧೀಶರ ಆಸ್ತಿ ಘೋಷಣೆಯನ್ನು ರಹಸ್ಯವಾಗಿ ಇರಿಸುತ್ತದೆ ಅಲ್ಲದೆ, ಇದನ್ನು ಮಾಹಿತಿ ಹಕ್ಕು ಕಾಯ್ದೆಯ ಕಕ್ಷೆಯಿಂದ ಹೊರಗಿರಿಸಲಾಗಿದೆ. ನ್ಯಾಯಿಕ ದುರ್ನಡತೆಯ ತನಿಖೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಧೀಶರು ತಮ್ಮ ಆಸ್ತಿ ಬಹಿರಂಗಪಡಿಸಬೇಕಾಗುತ್ತದೆ.
ಅದಾಗ್ಯೂ, ಮಸೂದೆಯ ಪ್ರಕಾರ ನ್ಯಾಯಾಧೀಶರು ತಮ್ಮ ಆಸ್ತಿಯ ವಿವರಣೆಯನ್ನು ಮುಖ್ಯನ್ಯಾಯಾಧೀಶರಿಗೆ ಸಲ್ಲಿಸಬೇಕಾಗುತ್ತದೆ. ಹೈಕೋರ್ಟ್ ನ್ಯಾಯಾಧೀಶರು ತಮ್ಮ ಮುಖ್ಯನ್ಯಾಯಾಧೀಶರಿಗೆ, ಅಂತೆಯೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭಾರತದ ಮುಖ್ಯನ್ಯಾಯಾಧೀಶರಿಗೆ ಹಾಗೂ ಅವರು ಈ ವಿವರಗಳನ್ನು ತಮ್ಮ ಆಸ್ತಿಯ ವಿವರಗಳನ್ನೂ ಸೇರಿಸಿ ರಾಷ್ಟ್ರಾಧ್ಯಕ್ಷರಿಗೆ ಕಳುಹಿಸುತ್ತಾರೆ.