ಈಗಾಗಲೇ ಸಾಕಷ್ಟು ಟೀಕೆಗೆ ಗುರಿಯಾಗಿರುವ ತಮ್ಮ ಹಾಗೂ ರಾಜಕೀಯ ಗುರು ಕಾನ್ಶಿರಾಂ ಪ್ರತಿಮೆಗಳನ್ನೊಳಗೊಂಡ ಪಾರ್ಕ್ ಸ್ಥಾಪನೆಗೆ ಮಾಯಾವತಿ ಮತ್ತೆ 556 ಕೋಟಿ ರೂಪಾಯಿ ನೀಡುವಂತೆ ಸೋಮವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ನಲ್ಲಿ ಕೋರಿದ್ದಾರೆ.
ಮಾಯಾವತಿ ಅವರು ಕನಸಿನ ಈ ಯೋಜನೆಗೆ ಈಗಾಗಲೇ 1,500 ಕೋಟಿ ರೂಪಾಯಿ ವೆಚ್ಚವಾಗಿದೆ. ಇದು ಸಾಲದು ಇನ್ನೂ 556 ಕೋಟಿ ರೂಪಾಯಿ ಬೇಕು ಎಂದು ಮಾಯಾವತಿ ಸರ್ಕಾರ ಸೋಮವಾರ ಬೇಡಿಕೆ ಇಟ್ಟಿದೆ.
ಆದರೆ ಅವೆಲ್ಲಕ್ಕಿಂತ ಅಚ್ಚರಿ ಮೂಡಿಸಿದ ಅಂಶವೆಂದರೆ ಬರ ಪರಿಹಾರಕ್ಕಾಗಿ 250 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೀಡಬೇಕೆಂದು ರಾಷ್ಟ್ರೀಯ ವಿಪತ್ತು ಮಂಡಳಿ ಮುಂದೆ ಬೇಡಿಕೆ ಇಟ್ಟಿದೆ.
ಬರ ಪರಿಹಾರಕ್ಕೆ ಕೇವಲ 250 ಕೋಟಿ ರೂಪಾಯಿ, ಪ್ರತಿಮೆ ಸ್ಥಾಪನೆಗೆ ಬಹುಕೋಟಿ ಬೇಡಿಕೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಸೋಮವಾರ ಮಾಯಾವತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡವು. ಮಾಯಾ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಪ್ರತಿಮೆ ಸ್ಥಾಪನೆ ವಿರುದ್ಧ ಬ್ಯಾನರ್ಗಳನ್ನು ವಿಧಾನಸಭೆಯಲ್ಲಿ ಪ್ರದರ್ಶಿಸಿದರು.
ರಾಜ್ಯಾದ್ಯಂತ ಪ್ರತಿಮೆ ಸ್ಥಾಪನೆಗಾಗಿಯೇ ಮಾಯಾವತಿ ಸರ್ಕಾರ 2ಸಾವಿರ ರೂಪಾಯಿ ಕೋಟಿಯಷ್ಟು ಹಣವನ್ನು ವ್ಯಯಿಸಿರುವುದಾಗಿ ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿ, ಮಾಯಾ ನಿರ್ಧಾರದ ವಿರುದ್ಧ ಟೀಕೆಗಳ ಸುರಿಮಳೆಗೈದವು.