ಹಂದಿಜ್ವರ ಪೀಡಿತ ರೋಗಿಗಳನ್ನು ನಿಭಾಯಿಸಲು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವಾಲಯವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಹಂದಿಜ್ವರ ರೋಗಕ್ಕೆ ರಾಷ್ಟ್ರದಲ್ಲಿ ಬಾಲಕಿಯೊಬ್ಬಳು ಬಲಿಯಾಗಿರುವ ಮರುದಿವಸ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
14 ವರ್ಷದ ಬಾಲಕಿ ಪುಣೆ ಆಸ್ಪತ್ರೆಯಲ್ಲಿ ಸೋಮವಾರ ಅಸುನೀಗಿದ್ದಳು. ಈಕೆಕೆ ತುಂಬ ತಡವಾಗಿ ಸೂಕ್ತವಾದ ಚಿಕಿತ್ಸೆ ಲಭಿಸಿದೆ ಎಂದು ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಮಾರ್ಗದರ್ಶಿ ಸೂತ್ರಗಳನ್ನು ಪರಾಮರ್ಷಿಸಲು ಆರೋಗ್ಯ ಸಚಿವಾಲಯ ಉನ್ನತ ಮಟ್ಟದ ಸಭೆ ನಡೆಸಲಿದೆ. ಆರೋಗ್ಯ ಸಚಿವ ಗಲಾಂನಬಿ ಅಜಾದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ನರೇಶ್ ದಯಾಲ್, ಆರೋಗ್ಯ ಸಂಶೋಧನಾ ಕಾರ್ಯದರ್ಶಿ ವಿ.ಎನ್. ಕಟೋಚ್ ಹಾಗೂ ಡಿಜಿಎಚ್ಎಸ್ ಆರ್.ಕೆ. ಶ್ರೀವಾಸ್ತವ ಭಾಗವಹಿಸಲಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ರಾಷ್ಟ್ರಾದ್ಯಂತ ಹಂದಿಜ್ವರವನ್ನು ನಿಭಾಯಿಸಲು ಹೊಸ ಮಾರ್ಗದರ್ಶಿ ಸೂತ್ರವನ್ನು ಸಿದ್ಧಪಡಿಸಲು ಆರೋಗ್ಯ ಸಚಿವರು ಡಿಜಿಎಚ್ಎಸ್ಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
"ಪ್ರಸಕ್ತ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ಪ್ರತ್ಯೇಖವಾಗಿ ಇರಿಸಲಾಗುತ್ತದೆ. ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ನಾವು ತಜ್ಞರು ಹಾಗೂ ವೈದ್ಯರ ಬಳಿ ಚರ್ಚಿಸಿದ್ದು ಹೊಸ ಮಾರ್ಗದರ್ಶನಗಳನ್ನು ನೀಡಲಿದ್ದೇವೆ. ಈ ಮೂಲಕ ರೋಗ ಪತ್ತೆಯಾಗುವ ಮುಂಚಿತವಾಗಿಯೇ ರೋಗಿಯನ್ನು ಪ್ರತ್ಯೇಕವಾಗಿ ಇರಿಸಬೇಕಾಗಿಲ್ಲ" ಎಂದು ಸಚಿವರು ಹೇಳಿದ್ದಾರೆ.
ಎಚ್1ಎನ್1 ವೈರಸ್ ಸೋಂಕಿನ ಪತ್ತೆಯಾದರೆ ಆ ಬಳಿಕವೇ ಆ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕೇ ಅಥವಾ ವೈದ್ಯಕೀಯ ಚಿಕಿತ್ಸೆ ನೀಡಬೇಕೇ ಎಂಬುದನ್ನು ಬಳಿಕ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪುಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ವರಪೀಡಿತ ಬಾಲಕಿಗೆ ಸಾಮಾನ್ಯ ಫ್ಲೂ ಜ್ವರಕ್ಕೆ ಚಿಕಿತ್ಸೆ ನೀಡಲಾಗಿತ್ತು. ಆಕೆ ಬಳಿಕ ಮನೆಗೆ ತೆರಳಿದ್ದಳು. ಜ್ವರ ಕಮ್ಮಿಯಾಗದ ಕಾರಣ ಆಕೆಯನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮೊದಲ ಎರಡು ದಿನಗಳು ಆಕೆಗೆ ಫ್ಲೂಗೆ ಚಿಕಿತ್ಸೆ ನೀಡಲಾಗಿತ್ತು.
ಆದರೆ ಆಕೆಯ ಶ್ವಾಸಕೋಶಗಳಿಗೆ ಹಾನಿಯಾದ ಬಳಿಕವೇ ಆಕೆಯ ಸ್ಥಿತಿ ಅಸಜವೆಂಬುದು ವೈದ್ಯರಿಗೆ ತಿಳಿಯಿತು. ಅಷ್ಟರಲ್ಲಿ ತಮಿಫ್ಲೂ ಚಿಕಿತ್ಸೆಗೆ ತುಂಬ ತಡವಾಗಿತ್ತು ಎಂದು ಅಜಾದ್ ತಿಳಿಸಿದ್ದಾರೆ.
ಸೋಮವಾರ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ರಾಷ್ಟ್ರದಲ್ಲಿ ಇದುವರೆಗೆ ಒಟ್ಟು 558 ಮಂದಿ ಸೋಂಕು ಪೀಡಿತರಾಗಿದ್ದರು. ಇವರಲ್ಲಿ 470 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು 2,479 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.