ರಾಯ್ಪುರ: ಭಾರತದ ಮಾವೋವಾದಿ ರಾಜಧಾನಿ ಎಂದು ಕರೆಯಬಹುದಾದ ಛತ್ತೀಸ್ಗಢದಲ್ಲಿ ಎಕೆ 47 ಹೊಂದಿರುವ ನಕ್ಸಲರನ್ನು ಎದುರಿಸಬೇಕಾದ ಪೊಲೀಸರ ಬಳಿ ಇರುವುದು ಬೆತ್ತ ಅಥವಾ ಲಾಠಿ!
ಇಲ್ಲಿರುವ ಸಾವಿರಾರು ಮಂದಿ ಪೊಲೀಸರು ನಕ್ಸಲರೊಂದಿಗೆ ಹೋರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರ ಬದಲಿಗೆ ಸೇವೆಯಿಂದ ಅಮಾನತ್ತಾದರೂ ಪರ್ವಾಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಆದರೆ ತಮ್ಮ ಸಿಬ್ಬಂದಿಗಳು ಧೈರ್ಯಗುಂದಿದ್ದಾರೆ ಮತ್ತು ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ರಾಜ್ಯದ ಪೊಲೀಸ್ ಮುಖ್ಯಸ್ಥರು ಅಲ್ಲಗಳೆಯುತ್ತಾರೆ. "ಮಾವೋವಾದಿ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ನಾವು ಕಾರ್ಯಾಚರಣೆ ನಡೆಸುತ್ತಿಲ್ಲ ಎಂದಾದರೆ ಪೊಲೀಸರು ಎದೆಗುಂದಿದ್ದಾರೆ ಎಂಬರ್ಥ. ಆದರೆ ವಾಸ್ತವ ಎಂದರೆ ನಾವು ಮಾವೋವಾದಿ ನಿಯಂತ್ರಿತ ಪ್ರದೇಶಗಳಲ್ಲಿ ಹೋರಾಟ ಮಾಡಿ ಅವರನ್ನು ಕೊಂದು ಹಾಕಿದ್ದೇವೆ" ಎಂದು ಡಿಜಿಪಿ ವಿಶ್ವರಂಜನ್ ಹೇಳುತ್ತಾರೆ.
ಆದರೆ ಕೆಲವು ಪೊಲೀಸರು ಬೇರೆಯದೇ ಕಥೆ ಹೇಳುತ್ತಾರೆ. ದಟ್ಟಾರಣ್ಯದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿರುವ ಪೊಲೀಸರು, ತಮ್ಮ ಜೀವ ಕಾಯ್ದುಕೊಳ್ಳಲು ಬೇರೆ ವಿಧಿ ಇಲ್ಲದೆ, ಗೆರಿಲ್ಲಾಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಚತ್ತೀಸ್ಗಢದ ವಿಶಾಲ ಪ್ರದೇಶದಲ್ಲಿ ಮಾವೋವಾದಿಗಳ ಕೈ ಮೇಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.
"ನಂಬಿದರೆ ನಂಬಿ, ಕೆಲವು ಪೊಲೀಸ್ ಪೇದೆಗಳು ದಿನನಿತ್ಯ ಕರ್ತವ್ಯ ಎಂಬಂತೆ ಸ್ಥಳೀಯ ನಕ್ಸಲ್ ನಾಯಕರಿಗೆ ಸೆಲ್ಯೂಟ್ ಹೊಡೆಯುತ್ತಾರೆ. ತಮ್ಮ ಜೀವ ಉಳಿಸಿಕೊಳ್ಳುವ ಏಕಮಾತ್ರ ಕಾರಣಕ್ಕಾಗಿ ಅವರು ಇಂತಹ ಧೋರಣೆ ತಳೆದಿದ್ದಾರೆ" ಎಂದು ಮೂಲಗಳು ಹೇಳಿವೆ. ಆದರೆ ರಾಯ್ಪುರದಲ್ಲಿ ಮಾವೂವಾದಿಗಳ ದಿನಗಳು ಅಂತ್ಯಗೊಳ್ಳುತ್ತಿದೆ ಎಂಬುದು ಉನ್ನತ ಪೊಲೀಸಧಿಕಾರಿಗಳ ಅಭಿಪ್ರಾಯ.
ಸುಮಾರು 38 ಸಾವಿರ ಪೊಲೀಸರು ಹಾಗೂ ಅರೆಸೇನಾ ಪಡೆಯ ಸಿಬ್ಬಂದಿಗಳನ್ನು ನಕ್ಸಲ್ ಬಾಹುಳ್ಯದ ಪ್ರದೇಶದಲ್ಲಿ ನೇಮಿಸಲಾಗಿದೆ. ಆದರೆ ಬಂಡುಕೋರರು 50 ಸಾವಿರ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಸುಮಾರು 15 ಸಾವಿರ ಮಹಿಳೆಯರು. ಆದರೆ ಇಲ್ಲಿ ನಿಯೋಜಿತರಾಗಿರುವ ಪೊಲೀಸರು ಎಕೆ 47 ಹೊಂದಿರುವ ನಕ್ಸಲರನ್ನು ತಮ್ಮ ಲಾಠಿಗಳ ಮುಖಾಂತರ ಎದುರಿಸಬೇಕು. ನಕ್ಸಲರು ಹೆಚ್ಚೆಚ್ಚು ಮೋರ್ಟರ್ಗಳು ಮತ್ತು ರಾಕೆಟ್ ಲಾಂಚರ್ಗಳನ್ನು ಬಳಸುತ್ತಿದ್ದಾರೆ ಎಂದೂ ವರದಿ ಹೇಳಿದೆ.
ಈ ಪ್ರದೇಶದಲ್ಲಿ ನಿಯೋಜಿತರಾಗಿರುವ ಪೊಲೀಸರು ಇದು ತಮಗೆ ಶಿಕ್ಷಾರ್ಹ ನೇಮಕ ಎಂದು ಭಾವಿಸಿಕೊಂಡಿದ್ದು, ಮಾವೋವಾದಿಗಳೊಂದಿಗೆ ಸ್ನೇಹ ಸಂಪಾದಿಸುವ ಮೂಲಕ ಮಾತ್ರ ನಾವು ಬದುಕ ಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಇಲ್ಲಿನ ಎಲ್ಲಾ 18 ಜಿಲ್ಲೆಗಳಲ್ಲೂ ಮಾವೋವಾದಿಗಳು ಸಕ್ರಿಯವಾಗಿದ್ದು, ಅವರು ಯಾವುದೇ ಸಮಯದಲ್ಲೂ, ಯಾವುದೇ ಪ್ರದೇಶದಲ್ಲೂ ದಾಳಿ ನಡೆಸಬಹುದಾಗಿದೆ.