ಮುಂಬೈದಾಳಿಯ ರೂವಾರಿ ಜಮಾತ್ ಉದ್ ದಾವಾ ಸಂಘಟನೆಯ ಸಂಸ್ಥಾಪಕ ಸಯೀದ್ ವಿಚಾರಣೆಯನ್ನು ಪಾಕ್ ಸುಪ್ರೀಂಕೋರ್ಟ್ ಅನಿರ್ದಿಷ್ಟವಾಗಿ ಮುಂದೂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪಾಕಿಸ್ತಾನ ನೀತಿ ಏನು ಎಂಬುದನ್ನು ತಿಳಿಯಬಯಸಿದ ಎನ್ಡಿಎ, ಸಮಾಜವಾದಿ ಪಕ್ಷ ಹಾಗೂ ಆರ್ಜೆಡಿಗಳು ಒಟ್ಟಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಥವಾ ಎಸ್.ಎಂ. ಕೃಷ್ಣ ಅವರು ಹೇಳಿಕೆ ನೀಡಬೇಕು ಎಂದು ಸಂಸತ್ತಿನಲ್ಲಿ ಒತ್ತಾಯಿಸಿದ್ದು, ಇದಕ್ಕೆ ಯಾವುದೇ ಭರವಸೆ ಸಿಕ್ಕದಾಗ ಸಭಾತ್ಯಾಗ ನಡೆಸಿದವು.
ಸಯೀದ್ ಪ್ರಕರಣದ ಅನಿರ್ದಿಷ್ಟಾವಧಿ ಮುಂದುವರಿಕೆ ವಿಚಾರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಶೂನ್ಯ ವೇಳೆಯಲ್ಲಿ ಸೋಮವಾರ ಎತ್ತಿದ್ದರು. ಇವರಿಗೆ ಬಿಜೆಪಿ, ಶಿವಸೇನೆ, ಜೆಡಿಯು ಹಾಗೂ ಆರ್ಜೆಡಿಗಳು ಬೆಂಬಲ ವ್ಯಕ್ತಪಡಿಸಿದ್ದವು.
ಈ ಬೆಳವಣಿಗೆ ಕುರಿತು ತಕ್ಷಣವೇ ಉತ್ತರಿಸಬೇಕು ಎಂದು ವಿರೋಧಪಕ್ಷಗಳು ಪಟ್ಟು ಹಿಡಿದು ಸದನದಲ್ಲಿ ಕೋಲಾಹಲ ಎಬ್ಬಿಸಿದಾಗ ಸದನವನ್ನು ಅರ್ಧಗಂಟೆ ಮುಂದೂಡಲಾಯಿತು.