ಕಳೆದ ನವೆಂಬರ್ ತಿಂಗಳಲ್ಲಿ ನಡೆದಿರುವ ಮುಂಬೈದಾಳಿಗೆ ಸಂಬಂಧಿಸಿದಂತೆ ಪೊಲೀಸರ ಪಾತ್ರದ ತನಿಖೆ ನಡೆಸುತ್ತಿರುವ ಪ್ರಧಾನ ಸಮಿತಿಯ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ನೀಡಿರುವ ನಿರ್ದೇಶನಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ವರದಿಯನ್ನು ಸಾರ್ವಜನಿಕಗೊಳಿಸುವ ಅವಶ್ಯಕತೆ ಇಲ್ಲದಿರುವುದರಿಂದ ಇದನ್ನು ಬಹಿರಂಗ ಪಡಿಸುವುದರಿಂದ ಯಾವುದೇ ಉದ್ದೇಶ ನೆರವೇರಿದಂತಾಗುವುದಿಲ್ಲ ತಡೆಯಾಜ್ಞೆ ಪಾಸುಮಾಡುತ್ತಾ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸಮಿತಿಯ ಸಂಪೂರ್ಣ ವರದಿಯನ್ನು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸರ್ಕಾರವು ಬಹಿರಂಗ ಪಡಿಸಿರಲಿಲ್ಲ. ಇದರ ಬದಲಿಗೆ ಕಾರ್ಯಕೈಗೊಳ್ಳಬೇಕಿರುವ ವರದಿಯನ್ನು ಮಾತ್ರ ಸದನದಲ್ಲಿ ಮಂಡಿಸಿತ್ತು.
ಆಗಸ್ಟ್ 21ರಂದು ಸುಪ್ರೀಂ ಕೋರ್ಟ್ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.
ಭಯೋತ್ಪಾದನಾ ದಾಳಿಯನ್ನು ತಡೆಯಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸಧಿಕಾರಿಗಳು ಹಾಗೂ ಗುಪ್ತಚರ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿ.ಪಿ. ಪಾಟೀಲ್ ಎಂಬ ವಕೀಲರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ವೇಳೆಗೆ ಸುಪ್ರೀಂ ಕೋರ್ಟ್ ಮೇಲಿನ ಪ್ರತಿಕ್ರಿಯೆ ನೀಡಿದೆ. ಅವರು ಪ್ರಧಾನ್ ಸಮಿತಿಯ ಪ್ರತಿ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.