ಗಜಿಯಾಬಾದಿನ ಎಂಬಿಎ ವಿದ್ಯಾರ್ಥಿಯೊಬ್ಬನ ವಿರುದ್ಧ ಡೆಹ್ರಾಡೂನ್ ಪೊಲೀಸರು ನಡೆಸಿದ್ದ ಎನ್ಕೌಂಟರ್ ನಕಲಿ ಎಂಬುದಾಗಿ ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.
22ರ ಹರೆಯದ ರಣ್ವೀರ್ ಸಿಂಗ್ ಪೊಲೀಸರತ್ತ ಗುಂಡು ಹಾರಿಸಿದ್ದ ಮತ್ತು ಆತ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಡೆಹ್ರಾಡೂನ್ ಪೊಲೀಸರ ಸಿದ್ಧಾಂತವನ್ನು ಸಿಬಿಐ ಸ್ಪಷ್ಟವಾಗಿ ತಳ್ಳಿಹಾಕಿದೆ. "ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿರಬಹುದು ಅಥವಾ ಪೊಲೀಸ್ ತನಿಖೆಯ ವೇಳೆಗೆ ಸಾವನ್ನಪ್ಪಿರುವ ಸಾಧ್ಯತೆ ಇದೆ- ಆತನ ಮೈಮೇಲೆ ಹಲವಾರು ಗಾಯಗಳಿದ್ದವು, ಆತ ಎನ್ಕೌಂಟರ್ ಸತ್ತಿದ್ದಾನೆಂದು ಕಾಣಿಸಲು ಆತನ ಮೇಲೆ ಗುಂಡಿಕ್ಕಿರಬಹುದು" ಎಂದು ಸಿಬಿಐ ವರದಿ ಹೇಳಿದೆ.
ಈ ಘಟನೆಯು ಜುಲೈ 3ರಂದು ಲಾಡ್ಪುರರ ಅರಣ್ಯದಲ್ಲಿ ನಡೆದಿತ್ತು. ಸತ್ತು ಬಿದ್ದಿದ್ದ ವಿದ್ಯಾರ್ಥಿಯ ಬಳಿ ಸಿಕ್ಕಿದ್ದ ಪಿಸ್ತೂಲನ್ನು ಫಾರೆನ್ಸಿಕ್ ಪರೀಕ್ಷೆಗೊಳಪಡಿಸಲಾಗಿದ್ದು, ಇದರಿಂದ ಒಂದೇ ಒಂದು ಗುಂಡು ಹಾರಿಸಿಲ್ಲ ಎಂಬುದು ಪತ್ತೆಯಾಗಿದೆ. ಇದು ಪೊಲೀಸ್ ಕಾರ್ಯಾಚರಣೆಯ ಕುರಿತು ಇನ್ನಷ್ಚು ಸಂಶಯ ಹುಟ್ಟುವಂತೆ ಮಾಡುತ್ತದೆ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿದೆ.
ಈ ನಕಲಿ ಎನ್ಕೌಂಟರ್ ಪ್ರಕರಣವು ಅತಿದೊಡ್ಡ ರಾಜಕೀಯ ವಿವಾದವಾಗಿ ಪರಿವರ್ತನೆಯಾಗಿತ್ತು. ಉತ್ತರಖಂಡ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ರಮೇಶ್ ಪೊಕ್ರಿಯಾಲ್ ಅವರು ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ಅಕ್ಷರಶ ಒತ್ತಡಕ್ಕೀಡಾಗಿದ್ದರು.
ರಾಜ್ಯ ಪೊಲೀಸ್ ಸಿಐಡಿ ನಡೆಸಿದ್ದ ತನಿಖೆಯ ಕುರಿತು ರಣ್ವೀರ್ನ ಕುಟುಂಬಿಕರು ಸಂಶಯ ವ್ಯಕ್ತಪಡಿಸಿದ್ದರು.
ತಾನು ಪೊಲೀಸ್ ಪರ ಪಕ್ಷಪಾತಿಯಲ್ಲ ಎಂದು ತೋರಿಸಲು ಮುಖ್ಯಮಂತ್ರಿಯವರು ಡೆಹ್ರಾಡೂನ್ ಎಸ್ಪಿ ಹಾಗೂ ಇತರ ಆರು ಪೊಲೀಸರನ್ನು ವರ್ಗಾವಣೆ ಮಾಡಿದ್ದರು. ಎನ್ಕೌಂಟರ್ನಲ್ಲಿ ಪಾಲ್ಗೊಂಡಿದ್ದ 14 ಪೊಲೀಸ್ ಸಿಬ್ಬಂದಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಪ್ರಕಾರ ರಾಯ್ಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.