ವಿದ್ಯಾರ್ಥಿಯೊಬ್ಬನನ್ನು ನಕಲಿ ಎನ್ಕೌಂಟರ್ನಲ್ಲಿ ಸಾಯಿಸಲಾಗಿದೆ ಎಂಬ ವಿವಾದಿಂದ ಭುಗಿಲೆದ್ದ ಹಿಂಸಾಚಾರದ ದಳ್ಳುರಿಯಲ್ಲಿ ಬೆಂದ ಮಣಿಪುರದ ರಾಜಧಾನಿ ಇಂಫಾಲದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. ಇದಲ್ಲದೆ ಅಲ್ಲಿ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿದೆ.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ರಾಜಧಾನಿಯ ವಿವಿಧೆಡೆ ಪೊಲೀಸ್ ಸಿಬ್ಬಂದಿ ಹಾಗೂ ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಪೂರ್ವ ಹಾಗೂ ಪಶ್ಚಿಮ ಇಂಫಾಲ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿರುವ ಸಂದರ್ಭದಲ್ಲಿ ಜನರು ಮನೆಯಿಂದ ಹೊರಬರದಿರುವಂತೆ ಪೊಲೀಸರು ಜನತೆಗೆ ಮನವಿ ಮಾಡಿದ್ದಾರೆ. ಕಳೆದ ರಾತ್ರಿಯಿಂದ ಕರ್ಫ್ಯೂ ಹೇರಲಾಗಿದೆ.
ಚುಂಗ್ಕಾನ್ ಸಂಜಿತ್(28) ಎಂಬಾತನನ್ನು ಇಂಫಾಲ್ ಮಾರುಕಟ್ಟೆಯಲ್ಲಿ ಜುಲೈ 23ರಂದು ಪೊಲೀಸ್ ಎನ್ಕೌಂಟರ್ನಲ್ಲಿ ಸಾಯಿಸಲಾಗಿತ್ತು.
ಅಪುಂಬ ಲೂಪ್ ಎಂಬ ಸಮಾಜ ಸೇವಾ ಸಂಸ್ಥೆಯು ನೀಡಿದ್ದ 48 ಗಂಟೆಗಳ ಬಂದ್ ಕರೆಯು ಮಂಗಳವಾರ ರಾತ್ರಿಗೆ ಮುಕ್ತಾಯವಾಗಿತ್ತು. ವಿದ್ಯಾರ್ಥಿಯ ಸಾವನ್ನು ಪ್ರತಿಭಟಿಸಿ ಇದೇ ಸಂಘಟನೆಯು ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಲಿದೆ.
ಜುಲೈ 23ರ ಎನ್ಕೌಂಟರ್ನಲ್ಲಿ ಪಾಲ್ಗೊಂಡಿರುವ ಕಮಾಂಡೋಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ಸಂಘಟನೆಯು ಮಣಿಪುರ ಮುಖ್ಯಮಂತ್ರಿ ಓ ಇಬೋಬಿ ಸಿಂಗ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.