ಪ್ರತಿಕೂಲ ಹವಾಮಾನ ಹಾಗೂ ಉಗ್ರಗಾಮಿಗಳ ಬೆದರಿಕೆಯ ನಡುವೆಯೂ ಎರಡು ತಿಂಗಳ ಕಾಲದ ಅಮರನಾಥ ಯಾತ್ರೆ ಬುಧವಾರ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಶ್ವಾನದಳ ಹಾಗೂ ಸಶಸ್ತ್ರ ಪಡೆಗಳ ಕಾವಲಿನಲ್ಲಿ ಸುಮಾರು ನಾಲ್ಕು ಲಕ್ಷಯಾತ್ರಿಗಳು ಗುಹಾದೇವಾಲಯದಲ್ಲಿನ ಶಿವಲಿಂಗದ ದರ್ಶನ ಪಡೆದರು. ಹಿಮಾಲಯದ 3,880 ಅಡಿ ಎತ್ತರದಲ್ಲಿರುವ ಈ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ವಿವಿಧ ಹಂತದ ಭದ್ರತೆ ಒದಗಿಸಲಾಗಿತ್ತು.
ಲಷ್ಕರ್-ಇ-ತೋಯ್ಬಾ ಸೇರಿದಂತೆ ಉಗ್ರರು ಯಾತ್ರೆಯನ್ನು ಭಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಯಾತ್ರಿಗಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಮಾಡಿರುವ ಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿರುವುದಾಗಿ ದಕ್ಷಿಣ ಕಾಶ್ಮೀರದ ಸಿಆರ್ಪಿಎಫ್ ಡಿಐಜಿ ನಲಿನ್ ಪ್ರಭಾತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯಾತ್ರಾ ಪ್ರದೇಶದುದ್ದಕ್ಕೂ ವಿವಿಧ ಹಂತದ ಭದ್ರತೆಯನ್ನು ಒದಗಿಸಲಾಗಿತ್ತು. ಸೇನಾಜವಾನರು ಬೆಟ್ಟಪ್ರದೇಶಗಳಲ್ಲಿ ಯಾವದೇ ಅಕ್ರಮ ನುಸುಳುವಿಕೆಯನ್ನು ತಡೆಯುವ ಕಾವಲು ಕೈಗೊಂಡಿದ್ದರೆ, ಬಿಎಸ್ಎಫ್ ಯತ್ರಾಹಾದಿಯುದ್ದಕ್ಕೂ ಭದ್ರತೆ ಒದಗಿಸಿದ್ದರು.