ಒಬ್ಬ ವ್ಯಕ್ತಿಗೆ ನೀಡಲಾಗಿರುವ ಜಾತಿ ಪ್ರಮಾಣಪತ್ರವನ್ನು, ಆ ವ್ಯಕ್ತಿಗೆ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ನೀಡದೆ ಯಾವುದೇ ಪ್ರಾಧಿಕಾರ ರದ್ದುಪಡಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಬುಧವಾರ ಸುಪ್ರೀಂ ಕೋರ್ಟ್ ನೀಡಿದೆ.
ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಆರ್.ಎಂ. ಲೋಧಾ ಅವರನ್ನೊಳಗೊಂಡ ನ್ಯಾಯಪೀಠವು "ಇಂತಹ ಅವಕಾಶ ನೀಡದೆ ಇರುವುದು ಸ್ವಾಭಾವಿಕ ನ್ಯಾಯದ ಸಿದ್ಧಾಂತಗಳ ಉಲ್ಲಂಘನೆಯಾಗುತ್ತದೆ ಮತ್ತು ಇಂತಹ ಆದೇಶಗಳನ್ನು ಬದಿಗಿರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಮನವಿದಾರರ ಜಾತಿ ದೃಢಪತ್ರವನ್ನು ರದ್ದುಗೊಳಿಸುವ ಮುಂಚಿತವಾಗಿ ಆತನಿಗೆ ವಾದ ಮಂಡಿಸಲು ಅಧಿಕಾರಿಗಳು ಅವಕಾಶ ನೀಡಬೇಕಿತ್ತು ಎಂದು ನ್ಯಾಯಪೀಠ ಹೇಳಿದೆ.
ತನ್ನ ಜಾತಿ ದೃಢಪತ್ರಿಕೆಯನ್ನು ಅಧಿಕಾರಿಗಳು ರದ್ದು ಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಹರ್ಯಾಣದ ಪೊಲೀಸ್ ಪೇದೆಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.