ಮುಂಬೈದಾಳಿ ಕೋರ, ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್, ಭಾರತೀಯ ಹಬ್ಬವಾದ ರಕ್ಷಾಬಂಧನದ ಸಂದರ್ಭದಲ್ಲಿ ತನಗೆ ಯಾರಾದರೂ ರಾಖಿ ಕಟ್ಟಬೇಕು ಎಂಬ ಇಚ್ಚೆಯನ್ನು ವ್ಯಕ್ತಪಡಿಸಿದ್ದಾನೆ ಎಂದು ಆತನ ವಕೀಲರು ಹೇಳಿದ್ದಾರೆ.
"ನ್ಯಾಯಾಲಯದಲ್ಲಿ ಹಲವಾರು ಮಂದಿ ರಂಗುರಂಗಿನ ರಾಖಿಕಟ್ಟಿರುವುದನ್ನು ಕಂಡಬಳಿಕ ಆತ ಈ ಅಸೆ ವ್ಯಕ್ತಪಡಿಸಿದ್ದಾನೆ" ಎಂದು ಆತನಿಗಾಗಿ ಸರ್ಕಾರ ನೇಮಿಸಿರುವ ವಕೀಲ ಎಸ್.ಜಿ. ಅಬ್ಬಾಸ್ ಕಾಜ್ಮಿ ತಿಳಿಸಿದ್ದಾರೆ. ತನ್ನ ಕಕ್ಷಿದಾರನ ಇಚ್ಚೆಯಿಂದ ದಿಗ್ಭ್ರಮೆಗೊಂಡಿರುವ ಕಾಜ್ಮಿ, ಕಸಬ್ನನ್ನು ಸಹೋದರನೆಂದು ಪರಿಗಣಿಸುವ ಯಾವುದಾದರೂ ಮಹಿಳೆ ಆತನ ಕೈಗೆ ರಾಖಿ ಕಟ್ಟಬಹುದು ಎಂದು ಹೇಳಿದ್ದಾರೆ.
ವಕೀಲ ಕಾಜ್ಮಿ, ಕಸಬ್ಗೆ ರಕ್ಷಾಬಂಧನದ ಮಹತ್ವವನ್ನು ಮತ್ತು ಸಹೋದರ ಸಹೋದರಿಯರ ನಡುವಿನ ಅಕ್ಕರೆ ಮತ್ತು ಬಂಧನದ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂಬುದನ್ನು ಬಳಿಕ ವಿವರಿಸಿದರು.
ಕಳೆದ ನವೆಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್ ಇದೀಗ ಮುಂಬೈನ ಅರ್ಥರ್ ಜೈಲಿನಲ್ಲಿ ಬಂಧಿಯಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ.