ಹಿಂದು ವಿವಾಹ ಕಾಯ್ದೆಯಲ್ಲಿ 2ನೇ ಮದುವೆಯಾಗಲು ಅವಕಾಶವಿಲ್ಲದ ಕಾರಣ ಇಸ್ಲಾಂಗೆ ಮತಾಂತರ ಹೊಂದಿ ಮತ್ತೊಂದು ಮದುವೆಯಾಗುವ ಚಾಂದ್ ಮೊಹಮ್ಮದ್ ಅಲಿಯಾಸ್ ಚಂದರ್ ಮೋಹನ್ರಂಥ ಬಹುಪತ್ನಿವಲ್ಲಭರಿಗೆ ಇನ್ನು ಮುಂದೆ ಮೂಗುದಾರ ಬೀಳಲಿದೆ.
ಹಿಂದು ವಿವಾಹ ಕಾಯ್ದೆಯ 17ಎ ಕಲಂಗೆ ತಿದ್ದುಪಡಿ ತಂದು, ಮೊದಲ ಮದುವೆಯಿಂದ ವಿಚ್ಛೇದನ ಪಡೆಯದೆ ಮತಾಂತರ ಹೊಂದಿದರೆ ಮತ್ತೊಂದು ಮದುವೆಯಾಗಲು ಸಾಧ್ಯವಿಲ್ಲ ಎಂಬ ನಿಯಮ ಸೇರಿಸಲು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಶಿಫಾರಸನ್ನು ಕಾನೂನು ಸಚಿವಾಲಯ ಅಂಗೀಕರಿಸಿ ಕಾನೂನಿಗೆ ತಿದ್ದುಪಡಿ ತಂದರೆ ಹಿಂದು ಅಥವಾ ಬೇರೆ ಧರ್ಮದವರು 2ನೇ ಮದುವೆಯಾಗುದಕ್ಕೆಂದೇ ಇಸ್ಲಾಂಗೆ ಮತಾಂತರ ಹೊಂದುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.
ನ್ಯಾ.ಎ.ಆರ್.ಲಕ್ಷ್ಮಣನ್ ಮುಖ್ಯಸ್ಥರಾಗಿರುವ ಕಾನೂನು ಆಯೋಗ, '2ನೇ ಮದುವೆಗೆಂದೇ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದುವುದು ಅನಾರೋಗ್ಯಕರ ಮತ್ತು ಅನೈತಿಕ ಸಂಪ್ರದಾಯ' ಎಂದು ತನ್ನ ಶಿಫಾರಸಿನಲ್ಲಿ ಹೇಳಿದೆ.