ಒಂದು ಕೋಟಿ ರೂಪಾಯಿ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿರುವ ಎಸ್ಸಿ-ಎಸ್ಎಟಿ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಪುತ್ರ ಸರಬ್ಜ್ಯೋತ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ತನ್ನ ವಶದಲ್ಲಿ ಮತ್ತಷ್ಟು ದಿವಸ ಮುಂದುವರಿಸಬೇಕು ಎಂಬ ಸಿಬಿಐ ಅರ್ಜಿಯನ್ನು ತಳ್ಳಿಹಾಕಿರುವ ಮುಂಬೈ ವಿಶೇಷ ನ್ಯಾಯಾಲಯ, ಈ ನಾಲ್ಕೂ ಆರೋಪಿಗಳನ್ನು ಆ.12ರವರೆಗೆ ನ್ಯಾಯಾಂಗ ವಶಕ್ಕೊಪಿಸಿದೆ.
ಈ ನಡುವೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಸರಬ್ಜ್ಯೋತ್ ಸಿಂಗ್ ತನಿಖೆಯಲ್ಲಿ ಸಹಕರಿಸುತ್ತಿಲ್ಲ. ಹಾಗಾಗಿ ಆರೋಪಿಗಳನ್ನು ವಿಚಾರಣೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಸಿಬಿಐ ಅರ್ಜಿಯಲ್ಲಿ ಕೋರಿತ್ತು. ಆದರೆ ಇದನ್ನು ತಳ್ಳಿಹಾಕಿದ ನ್ಯಾಯಾಧೀಶ ಎಸ್.ಪಿ.ಹಯತ್ನಗರ್ಕರ್, ತನಿಖೆ ನಡೆಸಲು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು ಎಂದರು.
ಬೂಟಾ ಸಿಂಗ್ ಪುತ್ರ ಸರಬ್ಜೋತ್ ಸಿಂಗ್ ನಾಸಿಕ್ ಮೂಲದ ಗುತ್ತಿಗೆದಾರರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಟಿ ರೂ.ಲಂಚ ಪಡೆದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಒಳಗಾದ ಬೆಂಗಳೂರಿನ ದುಕ್ ಸಿಂಗ್ ಹವಾಲಾ ಜಾಲದ ಮೂರನೇ ವ್ಯಕ್ತಿಯಾಗಿದ್ದ. ಕೇಂದ್ರ ಮಾಜಿ ಸಚಿವ ಬೂಟಾ ಸಿಂಗ್ ಅವರ ಪುತ್ರ ಭಾಗಿಯಾಗಿರುವ ಒಂದು ಕೋಟಿ ರೂಪಾಯಿ ಲಂಚ ಸ್ವೀಕಾರ ಪ್ರಕರಣದ ಹಿಂದೆ ಹವಾಲಾ ಜಾಲದ ಪಾತ್ರ ಇರುವ ಬಗ್ಗೆ ಸಿಬಿಐನ ಎನ್ಪೋರ್ಸ್ಮೆಂಟ್ ಡೈರೆಕ್ಟರೇಟ್ ತನಿಖೆ ನಡೆಸಿತ್ತು.