ವಿವಾದಾಸ್ಪದ ಲೇಖಕಿ ತಸ್ಲಿಮಾ ನಸ್ರೀನ್ ಅವರು ಮತ್ತೆ ಭಾರತಕ್ಕೆ ಬಂದಿದ್ದು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ತಸ್ಲಿಮಾ ವೀಸಾ ಆಗಸ್ಟ್ 17ಕ್ಕೆ ಅಂತ್ಯಗೊಳ್ಳಲಿದೆ.
ಇಸ್ಲಾಮಿಕ್ ಮೂಲಭೂತವಾದಿಗಳ ಕೆಂಗಣ್ಣಿಗೆ ಬಲಿಯಾಗಿದ್ದ ತಸ್ಲಿಮಾರನ್ನು 2007ರ ನವೆಂಬರ್ ತಿಂಗಳಲ್ಲಿ ನಾಟಕೀಯವಾಗಿ ಪಶ್ಚಿಮಬಂಗಾಳದಿಂದ ತೆರಳವುಗೊಳಿಸಲಾಗಿತ್ತು. ಗುರುವಾರ ಮುಂಜಾನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ತಕ್ಷಣವೇ ಭದ್ರತಾ ಸಿಬ್ಬಂದಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ತನ್ನ ವಿವಾದಾಸ್ಪದ ಪುಸ್ತಕ ಲಜ್ಜಾದಿಂದಾಗಿ ಬಂಗ್ಲಾದೇಶದಿಂದ ಗಡಿಪಾರಿಗೀಡಾಗಿರುವ ತಸ್ಲೀಮಾ ಭಾರತದ ಕೋಲ್ಕತಾವನ್ನು ಬಹುವಾಗಿ ನೆಚ್ಚಿಕೊಂಡಿದ್ದು ಅಲ್ಲೇ ವಾಸ್ತವ್ಯ ಹೂಡಿದ್ದರು.
ತಸ್ಲಿಮಾ ಅವರು ಭಾರತದ ಶಾಶ್ವತ ಪೌರತ್ವಕ್ಕೆ ವಿನಂತಿಮಾಡಿದ್ದು, ಈ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಗಸ್ಟ್ 27ರಂದು ತನ್ನ 47ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಸ್ಲಿಮಾ ತನ್ನ ವೀಸಾ ವಿಸ್ತರಣೆ ಅರ್ಜಿ ಸಲ್ಲಿಸಿದ್ದು, ಸರ್ಕಾರವು ಇದನ್ನು ವಿಸ್ತರಣೆ ಮಾಡಬಹುದಾಗಿದೆ ಎಂದು ಮೂಲಗಳು ಹೇಳಿವೆ.