ಬುಧವಾರದಂದು ರಾಷ್ಟ್ರದ ರಾಜಧಾನಿ ದೆಹಲಿ ರಕ್ಷಾಬಂಧನದ ಸಂಭ್ರಮದಲ್ಲಿ ಮುಳುಗಿದ್ದರೆ, ಪಕ್ಕದ ಫರಿದಾಬಾದಿನಲ್ಲಿ ವ್ಯಕ್ತಿಯೊಬ್ಬ ತನ್ನ 60ರ ಹರೆಯದ ಸಹೋದರಿಗೆ ಬೆಂಕಿಇಕ್ಕಿರುವುದು ವರದಿಯಾಗಿದೆ. ಮಯಾದೇವಿ ಎಂಬ ಈ ಮಹಿಳೆಗೆ ಶೇ.85ರಷ್ಟು ಸುಟ್ಟಗಾಯಗಳಾಗಿದ್ದು ಈಗ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಟ ಮಾಡುತ್ತಿದ್ದಾರೆ.
ಮಾಯಾದೇವಿಯವರು ಹಳೆಯ ಫರಿದಾಬಾದ್ ಪ್ರದೇಶದ ನಿವಾಸಿ. ಅವರ ತಮ್ಮ 45ರ ಹರೆಯದ ರಾಜ್ಕುಮಾರ್ ಎಂಬವರು ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ತೆರಳಿದ್ದ ವೇಳೆ ಕೊಠಡಿಯಲ್ಲಿ ಮಲಗಿದ್ದ ಅಕ್ಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಫರಿದಾಬಾದಿನ ಬೇಕರಿಯೊಂದರಲ್ಲಿ ಕೆಲಸಮಾಡುತ್ತಿರುವ ರಾಜ್ ಕುಮಾರ್ ಕೋಪದಿಂದ ದಿಮಿಗುಟ್ಟುತ್ತಲೇ ತನ್ನ ಪುತ್ರನನ್ನು ಹುಡುಕುತ್ತಾ ಬಂದಿದ್ದರು. ಅವರ ಪುತ್ರ ಸುಮಿತ್ನನ್ನು ಕಾಣದಾದಾಗ ಪೆಟ್ರೋಲ್ ಕ್ಯಾನ್ ತಂದು ಮಲಗಿದ್ದ ಮಾಯಾ ದೇವಿಯವರ ಮೇಲೆ ಸುರಿದು ಬೆಂಕಿ ಹಚ್ಚಿ ಜಾಗ ಖಾಲಿ ಮಾಡಿದ್ದ"ಎಂಬುದಾಗಿ ಮಾಯಾ ಅವರ ಅಳಿಯ ಕೇಶವ ಠಾಕೂರ್ ಹೇಳಿದ್ದಾರೆ.
ಮಾಯಾ ಅವರ ಕಿರುಚಾಟ ಕೇಳಿ ಹೊರಗಡೆ ಬಂದ ಅವರ ಪುತ್ರಿ ರೇಖಾ ಸಹಾಯಕ್ಕೆ ಧಾವಿಸಿದರು. ಅವರಿಗೆ ನೆರೆಯವರು ಸಹಾಯ ಮಾಡಿದರು. ಕಂಬಳಿಗಳನ್ನು ಹೊದಿಸಿ ಬೆಂಕಿ ನಂದಿಸಿದ ಬಳಿಕ ಪೊಲೀಸರಿಗೆ ತಿಳಿಸಿ ಮಾಯಾರನ್ನು ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ನೆರೆಯ ಹಿರಾಲಾಲ್ ಹೇಳುತ್ತಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಜ್ ಕುಮಾರ್ ಪತ್ತೆಗೆ ಮುಂದಾಗಿದ್ದಾರೆ. ರಾಜ್ ಕುಮಾರ್ ಅವರನ್ನು ಅವರ ಪತ್ನಿ ಇತ್ತೀಚೆಗೆ ತೊರೆದಿದ್ದು, ಇದರಿಂದ ಆತ ಅಸಂತುಷ್ಟನಾಗಿದ್ದ ಎಂದು ಹೇಳಲಾಗಿದೆ. ತನ್ನ ಪತ್ನಿ ಬಿಟ್ಟು ಹೋಗಲು ಮಾಯಾ ಕಾರಣ ಎಂದು ಕೋಪದಿಂದ ಕುದಿಯುತ್ತಿದ್ದ ಆತ ಸೇಡುತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದ ಎನ್ನಲಾಗಿದೆ.