ಮುಂಬೈ: 2003ರಲ್ಲಿ ಮುಂಬೈಯ ಗೇಟ್ ವೇ ಆಫ್ ಇಂಡಿಯಾ ಹಾಗೂ ಜವೇರಿ ಬಜಾರಿನಲ್ಲಿ ಅವಳಿ ಸ್ಫೋಟ ನಡೆಸಿರುವ ಮೂವರು ಅಪರಾಧಿಗಳಿಗೆ ಮುಂಬೈಯ ವಿಶೇಷ ಟಾಟಾ ನ್ಯಾಯಾಲಯ ಒಂದು ಗುರುವಾರ ಮರಣ ದಂಡನೆ ವಿಧಿಸಿದೆ. ಇವರಲ್ಲೊಬ್ಬಳು ಮಹಿಳೆಯೂ ಸೇರಿದ್ದಾಳೆ.
ಹನೀಫ್ ಸಯೀದ್(46), ಆತನ ಪತ್ನಿ ಫೆಹ್ಮಿದ(43) ಹಾಗೂ ಇನ್ನೊಬ್ಬ ಸಂಚುಕೋರ ಅಶ್ರತ್ ಅನ್ಸಾರಿ(32) ಅವರುಗಳನ್ನು 2003ರ ಆಗಸ್ಟ್ 25ರಂದು ಬಾಂಬ್ ಇರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ನ್ಯಾಯಾಲಯ ನಿರ್ಧರಿಸಿತ್ತು. ಈ ಸ್ಫೋಟದಲ್ಲಿ 54 ಮಂದಿ ಸಾವನ್ನಪ್ಪಿ ಇತರ 244 ಮಂದಿ ಗಾಯಗೊಂಡಿದ್ದರು.
ಹನೀಫ್ ಸಯೀದ್ ಹಾಗೂ ಆತನ ಪತ್ನಿ ಫೆಹ್ಮಿದರು ಗೇಟ್ ವೇ ಆಫ್ ಇಂಡಿಯಾದ ಬಳಿ ಬಾಂಬ್ ಇರಿಸಿದ ಅಪರಾಧವೆಸಗಿದ್ದರೆ, ಅನ್ಸಾರಿ ಜವೇರಿ ಬಜಾರ್ನಲ್ಲಿ ಬಾಂಬ್ ಇರಿಸಿದ್ದ. ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕಂ ಅವರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ್ದು ಎಂದು ವಾದಿಸಿದ್ದು, ಈ ಪ್ರಕರಣದಲ್ಲಿ ಈ ಮೂವರು ಕೊಲ್ಲುವ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.
ಸಣ್ಣಪುಟ್ಟ ಸ್ಫೋಟಗಳಿಂದ ಅಸಂತುಷ್ಚರಾಗಿದ್ದ ಅಪರಾಧಿಗಳು ಹೆಚ್ಚು ಮಂದಿಯನ್ನು ಕೊಲ್ಲುವ ಉದ್ದೇಶದಿಂದ ಅವಳಿ ಸ್ಫೋಟಕ್ಕೆ ಆರ್ಡಿಎಕ್ಸ್ ಬಳಸಿದ್ದರು ಎಂದು ಅವರು ಹೇಳಿದ್ದಾರೆ.
ತನಗೆ ಮಕ್ಕಳಿರುವ ಕಾರಣ ಶಿಕ್ಷೆಯಲ್ಲಿ ಔದಾರ್ಯ ತೋರಬೇಕು ಎಂಬ ಫೆಹ್ಮಿದಾಳ ಮನವಿಯನ್ನು ತಳ್ಳಿಹಾಕಿದ ನ್ಯಾಯಾಲಯ ಆಕೆ ಎಸಗಿರುವ ಅಪರಾಧವು 'ಅಪರಿಮಿತ ಕ್ರೌರ್ಯ'ದಿಂದ ಕೂಡಿದ್ದು ಆಕೆ ಯಾವುದೇ ಮಾಫಿಗೆ ಅರ್ಹಳಲ್ಲ ಎಂದು ಹೇಳಿದೆ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪತಿಪತ್ನಿಗೆ ಫೋಟಾ ನ್ಯಾಯಾಲಯ ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲಾಗಿದೆ.
ಈ ದುಷ್ಕರ್ಮಿಗಳು ಇದಕ್ಕೂ ಮುಂಚಿತವಾಗಿ ಜುಲೈ28ರಂದು ಮುಂಬೈ ಉಪನಗರವಾಗಿರುವ ಘಾಟ್ಕೋಪರ್ನಲ್ಲಿ ಮುನಿಸಿಪಲ್ ಬಸ್ನಲ್ಲಿ ಬಾಂಬ್ ಇರಿಸಿದ್ದರು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ ಬರಿಯ ಇಬ್ಬರು ಸತ್ತಿದ್ದಾರೆಂದು ಈ ಖದೀಮರು ನಂತರದ ಸ್ಫೋಟದಲ್ಲಿ ಆರ್ಡಿಎಕ್ಸ್ ಬಳಸಿದ್ದರು.