ಹರ್ಯಾಣದ ಈ ಗ್ರಾಮದಲ್ಲಿ ಪ್ರತಿ 17 ದಿನಕ್ಕೊಂದು ಸಾವು ಸಂಭವಿಸುತ್ತದೆ. ಇದರ ಹಿಂದಿನ ಮರ್ಮವೇನು ಎಂದು ಅರಿಯದ ಗ್ರಾಮಸ್ಥರು ಕಂಗಾಲಾಗಿ ಹೋಗಿದ್ದಾರೆ. ಇದು ಸಂಭವಿಸುತ್ತಿರುವುದು ಹರ್ಯಾಣದ ಯಮುನಾನಗರ್ ಜಿಲ್ಲೆಯ ಅಮ್ಲೋಹ್ ಎಂಬ ಗ್ರಾಮದಲ್ಲಿ ಈಗ್ಗೆ ನಾಲ್ಕು ತಿಂಗಳಿಂದ ಪ್ರತೀ 17 ದಿನಕ್ಕೊಂದು ಸಾವು ಖಚಿತ ಎಂಬಂತಾಗಿ ಹೋಗಿದೆ.
ಅಮ್ಲೋಹ್ ಗ್ರಾಮದಲ್ಲೀಗ ಈ ಸಾವಿನ ಭೀತಿ ಜನರನ್ನು ಕಾಡುತ್ತಿದೆ. ಜನರು ತಮ್ಮ ಜೀವ ಕಾಪಾಡಿಕೊಳ್ಳುವ ಕ್ರಮವಾಗಿ ಮದ್ಯ, ಸೆಕ್ಸ್ ಸೇರಿದಂತೆ ಮಾಂಸಾಹಾರವನ್ನೂ ವರ್ಜಿಸಿದ್ದಾರೆ. ಐದು ಮಂದಿ ಆರೋಗ್ಯವಂತರು ಸಾವನ್ನಪ್ಪಿದ್ದು, ಮುಂದಿನ ಸರದಿ ಯಾರದ್ದೋ ಎಂಬ ಪುಕುಪುಕುವಿನಿಂದ ಮಂದಿ ದಿನ ದೂಡುವಂತಾಗಿದೆ.
"ಇದನ್ನು ಪ್ರಪಂಚ ನಂಬಲಾರದು. ಆದರೆ ನಾವು ಐದು ಮಂದಿ ಆರೋಗ್ಯವಂತರನ್ನು ಕಳೆದುಕೊಂಡಿದ್ದೇವೆ. 17ದಿನಕ್ಕೆ ಒಂದರಂತೆ ಇಲ್ಲಿ ಸಾವು ಸಂಭವಿಸುತ್ತದೆ. ನಮ್ಮ ಜೀವಕ್ಕೆ ಈ ಬಾರಿ ಏನೂ ಆಗದು ಎಂಬುದಾಗಿ ನಾವು ಭಾವಿಸುತ್ತೇವೆ" ಎಂಬುದಾಗಿ ಗ್ರಾಮದ ಸರಪಂಚರು ಹೇಳುತ್ತಾರೆ. ಅಲ್ಲದೆ ಗ್ರಾಮದೇದತೆ ಖೇರಾ ದೇವತೆಯು ನಮ್ಮ ಮೇಲೆ ಅಸಂತುಷ್ಟಳಾಗಿಬೇಕು. ಯಾರಾದರೂ ಘೋರ ತಪ್ಪು ಮಾಡಿರಬೇಕು, ಅದಕ್ಕಾಗಿ ನಮಗೀ ತೊಂದರೆ ಎದುರಾಗಿದೆ" ಎಂಬುದಾಗಿ ಅವರು ಹೇಳುತ್ತಾರೆ.
ಇದೆಲ್ಲ ಆರಂಭವಾದುದು ಮೇ13ರಂದು, 55ರ ಹರೆಯದ ರುಲಿಯಾ ರಾಮ್ ತನ್ನ ಹಾಸಿಗೆಯಲ್ಲೇ ಸಾವನ್ನಪ್ಪಿದ್ದರು. ಗ್ರಾಮಸ್ಥರು ಹೇಳುವ ಪ್ರಕಾರ ಅವರು ಒಂದು ದಿನ ಮುಂಚಿತವಾಗಿ ಚೆನ್ನಾಗೇ ಇದ್ದರು. ಇವರ ಬಳಿಕ ಸೀಮಾ ದೇವಿ ಎಂಬವರು ಅಲ್ಪಕಾಲದ ಅಸ್ವಸ್ಥತೆಯಿಂದಾಗಿ ತೀರಿಕೊಂಡರು. 22ರ ಹರೆಯದ ರಾಹುಲ್ ಎಂಬಾತನದ್ದು ಮೂರನೆಯ ನಿಗೂಢ ಸಾವು. ಈತ ನಿಖರವಾಗಿ 17 ದಿನದಬಳಿಕ ಅಂದರೆ ಜೂನ್ 16ರಂದು ಸಾವನ್ನಪ್ಪಿದ್ದ. ಇದಾದ ಬಳಿಕ ಜೂನ್ 3ರಂದು ಧರ್ಮಪಾಲ್ ಎಂಬಾತ ಕಣ್ಮುಚ್ಚಿದ್ದರೆ, ನಂತರದ ಸರದಿ 19ರ ಹರೆಯದ ರಮಣ್ ಕುಮಾರ್ ಎಂಬಾತನದ್ದು.
ಇದ್ದಕ್ಕಿದ್ದಂತೆ ಕುಸಿದ ಈತನನ್ನು ತಕ್ಷಣವೇ ಯಮುನಾನಗರ್ ಆಸ್ಪತ್ರೆಗೆ ತರಲಾಗಿದ್ದರೂ, ಆತರ ಆಸ್ಪತ್ರೆಗೆ ಕರೆತರುವ ವೇಳೆಗೇ ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು ಎಂದು ಆತನ ಮನೆಯವರು ಹೇಳುತ್ತಾರೆ. "ರಮಣ್ ನಮ್ಮೊಂದಿಗೆ ಊಟ ಮಾಡಿದ್ದ. ಕ್ಷಣಗಳ ಬಳಿಕ ಆತ ತನ್ನ ತಲೆಯನ್ನು ಎಡಕ್ಕೆ ತಿರುವಿ ಉಸಿರೇ ನಿಂತು ಹೋಯಿತು" ಎಂಬುದಾಗಿ ಆತನ ಚಿಕ್ಕಪ್ಪ ಹೇಳುತ್ತಾರೆ. ಅಮ್ಲೋಹ್ನಲ್ಲಿ ಕಳೆದ 70 ವರ್ಷಗಳಿಂದ ಜೀವಿಸುತ್ತಿರುವ ಕುಂತಾ ದೇವಿ ಎಂಬವರು ಹೇಳುವ ಪ್ರಕಾರ ಗ್ರಾಮದಲ್ಲಿ ಹಿಂದೆಂದೂ ಇಂತಹ ಉದ್ವಿಗ್ನತೆ ಸೃಷ್ಟಿಯಾಗಿದ್ದೇ ಇಲ್ಲವಂತೆ.
ಗ್ರಾಮದಲ್ಲೀಗ ಪ್ರತಿಯೊಬ್ಬರಿಗೂ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಏನೂ ಆಗದಿರಲಿ ದೇವರೇ ಎಂಬುದಾಗಿ ಪ್ರಾರ್ಥಿಸುವುದೇ ಕಾಯಕವಾಗಿದೆ. ನಾಳೆ ಏನಾಗುತ್ತದೋ ಎಂಬುದು ಎಲ್ಲರ ಚಿಂತೆಯಾಗಿದೆ. ಈ ಗ್ರಾಮದಲ್ಲಿ ಸರದಿಯಂತೆ 17 ದಿನಕ್ಕೊಂದು ಸಾವು ಸಂಭವಿಸುತ್ತಿರುವುದು ನಿಗೂಢವಾಗಿದೆ.