ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಬೂಟಾ ಸಿಂಗ್ ಪುತ್ರ ಸರೋಬ್ಜಿತ್ ಸಿಂಗ್ ಅಲಿಯಾಸ್ ಸ್ವೀಟಿ ಸಿಂಗ್ ಹಾಗೂ ಇತರ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯವೊಂದು ಗುರುವಾರ ಜಾಮೀನು ಮಂಜೂರು ಮಾಡಿದೆ.
ರಾಷ್ಟ್ರೀಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗದ ಅಧ್ಯಕ್ಷರಾಗಿರುವ ಬೂಟಾ ಸಿಂಗ್ ಪುತ್ರ ಸರೋಬ್ಜಿತ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ಜೈಲಿನಲ್ಲಿ ಇರಿಸಿಕೊಂಡರೆ ಅವರು ಇನ್ನಷ್ಟು ಕಠಿಣ ಕ್ರಿಮಿನಲ್ಗಳಾಗಿ ಹೆಚ್ಚು ಗಂಭೀರವಾದ ಅಪರಾಧಗಳನ್ನು ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಬಿಐ ನ್ಯಾಯಾಧೀಶ ಹಯತ್ನಾಗಾರ್ಕರ್ ಅವರು ಸರೋಬ್ಜಿತ್ ಸಿಂಗ್, ಅನೂಪ್ ದೇಗಿ, ಮದನೆ ಸೋಲಂಕಿ ಹಾಗೂ ದುಖ್ ಸಿಂಗ್ ಚೌವಾಣ್ ಅವರಿಗೆ ಒಂದು ಲಕ್ಷ ರೂಪಾಯಿ ಜಾಮೀನು ಆಧಾರದಲ್ಲಿ ಜಾಮೀನು ಮಂಜೂರು ಮಾಡಿದ್ದಾರೆ.
ಈ ಅಪರಾಧಿಗಳನ್ನು ಜೈಲಿನಲ್ಲಿ ಇರಿಸದೆ ಸಿಬಿಐ ಪ್ರಕರಣ ತನಿಖೆ ನಡೆಸಬಹುದಾಗಿದೆ. ಅವರನ್ನು ಜೈಲಿನಲ್ಲಿ ಮತ್ತಷ್ಟು ಸಮಯ ಇರಿಸಿದರೆ, ಕಠಿಣ ಅಪರಾಧಿಗಳಾಗಿ ಇನ್ನಷ್ಟು ಅಪರಾಧಗಳನ್ನು ಎಸಗಬಹುದು ಎಂಬುದಾಗಿ ನುಡಿದರು.
ಸರೋಬ್ಜಿತ್ನನ್ನು ಸಿಬಿಐ ಜುಲೈ 31ರಂದು ಬಂಧಿಸಿತ್ತು. ನಾಸಿಕ್ ಮೂಲದ ಗುತ್ತಿಗೆದಾರ ರಾಮರಾವ್ ಪಾಟೀಲ್ ಎಂಬಾತನ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಆಯೋಗದಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಮುಚ್ಚಿ ಹಾಕಲು ಸರೋಬ್ಜಿತ್ ಸಿಂಗ್ ಒಂದು ಕೋಟಿ ಲಂಚದ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.