ಒಂದು ಕೋಟಿ ರೂಪಾಯಿ ಲಂಚ ಹಗರಣದಲ್ಲಿ ಸಿಲುಕಿರುವ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಸಂಕಟ ಪಡುತ್ತಿರುವಾಗಲೇ ಬಿಹಾರ ಸರ್ಕಾರ ಬೂಟಾ ಮಂಜೂರು ಮಾಡಿದ್ದ ಯೋಜನೆಯೊಂದರ ತನಿಖೆಗೆ ಆದೇಶಿಸಿದೆ. ಇದರಿಂದ ಬೂಟಾ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.
ಆ.1ರಂದು ಬಿಹಾರದ ಸೀತಾಮಾಢಿ ಜಿಲ್ಲೆಯಲ್ಲಿ ಬಾಗ್ಮತಿ ನದಿದಂಡೆ ಒಡೆದು ಲಕ್ಷಾಂತರ ಮಂದಿ ಜನ ನಿರಾಶ್ರಿತರಾಗಿದ್ದು ನಿಮಗೆ ನೆನಪಿರಬಹುದು. ಆ ದಂಡೆ ನಿರ್ಮಿಸು 900ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಅನುಮತಿ ನೀಡಿದ್ದೇ ಬೂಟಾ ಸಿಂಗ್.
2005ರಲ್ಲಿ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದಾಗ ಅವರು ಬಿಹಾರ ರಾಜ್ಯಪಾಲರಾಗಿದ್ದರು. ನದಿ ದಂಡೆ ನಿರ್ಮಾಣ ಕೆಲಸದಲ್ಲಿ ಅನುಭವವೇ ಇಲ್ಲದ ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್ಟ್ರಕ್ಷನ್ ಎಂಬ ಕಂಪೆನಿಗೆ ಕೆಲಸದ ಗುತ್ತಿಗೆ ನೀಡಿದ್ದರು. ಆ ಕಂಪೆನಿ ನಿರ್ಮಿಸಿದ ದಂಡೆ ಈಗ ಒಡೆದು ಹೋಗಿದೆ. ಟೆಂಡರ್ ಕರೆಯದೆಯೇ ಈ ಗುತ್ತಿಗೆ ನೀಡಲಾಗಿದೆ.
ಯಾರೋ ಮಾಡಿದ ತಪ್ಪಿಗೆ ನಾವು ಹೊಣೆ ಹೊರುವುದಿಲ್ಲ ಹೀಗಾಗಿ ತಾಂತ್ರಿಕ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಆ ಸಮಿತಿ ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಕಂಪನಿಯ ವಿವರವಾದ ಯೋಜನಾ ವರದಿ ಹಾಗೂ ಮಾಡಿರುವ ಕೆಲಸವನ್ನು ಪರಿಶೀಲಿಸಲಿದೆ ಎಂದು ಜಲಸಂಪನ್ಮೂಲ ಸಚಿವ ವೀರೇಂದ್ರ ಯಾದವ್ ತಿಳಿಸಿದ್ದಾರೆ.