ತನ್ನ ಕಾಲುಮೇಲೆ ಎದ್ದು ನಿಲ್ಲಲೂ ಆಗದ 60 ಹರೆಯದ ನಿಶ್ಶಕ್ತ ಅಂಗವಿಕಲನೊಬ್ಬ ಪೊಲೀಸರ ಮೇಲೆ ದಾಳಿ ನಡೆಸಿ ಓಡಿಹೋಗಲು ಸಾಧ್ಯವೇ? ಇಲ್ಲಾ ಅಂತೀರಾ? ಆದರೆ ಉತ್ತರಪ್ರದೇಶ ಪೊಲೀಸರ ಪ್ರಕಾರ ಇದು ಸಾಧ್ಯ. ಮಾತ್ರವಲ್ಲದೆ ಇದನ್ನು ಸಾಬೀತು ಪಡಿಸುವಂತೆ ವ್ಯಕ್ತಿಯ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ.
ಲಕ್ನೋದಿಂದ 300 ಕಿಲೋಮೀಟರ್ ದೂರದಲ್ಲಿರುವ ಇಟಾವಾ ಜಿಲ್ಲೆಯ ಬಕೆವಾರ್ ಎಂಬಲ್ಲಿ ಎರಡು ಪಂಗಡಗಳೊಳಗೆ ಘರ್ಷಣೆಯುಂಟಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೇ.80ರಷ್ಟು ವೈಕಲ್ಯ ಹೊಂದಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಆಧಾರವಿಲ್ಲದೆ ನನಗೆ ಒಂದು ಅಂಗುಲದಷ್ಟೂ ಚಲಿಸಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯ ನನ್ನ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ" ಎಂದು ಕಿದ್ವಾಯಿ ನಗರದ ನಿವಾಸಿಯಾಗಿರುವ ಹಸನ್ ಎಂಬವರು ಹೇಳುತ್ತಾರೆ.
ಇವರ ವಿರುದ್ಧ ಕೊಲೆ ಯತ್ನ, ಪೊಲೀಸ್ ತಂಡದ ಮೇಲೆ ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ. ಭೂವಿವಾದಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಆಗಸ್ಟ್ 3ರಂದು ಕಲಹ ನಡೆದಿತ್ತು.
ಗುರುವಾರದಂದು ಇವರ ಮನೆಮೇಲೆ ಪೊಲೀಸ್ ದಾಲಿ ನಡೆದಾಗಲೇ ಹಸನ್ ಅವರಿಗೆ ಈ ಕುರಿತು ಅರಿವಿಗೆ ಬಂದಿತ್ತು. ಆ ವೇಳೆಯಲ್ಲಿ ಹಸನ್ ಮನೆಯಲ್ಲಿ ಇರಲಿಲ್ಲ. "ಮುಂದಿನ ಎರಡು ದಿನಗಳಲ್ಲಿ ಹಸನ್ ಶರಣಾಗದಿದ್ದರೆ, ಆತನನ್ನು ಬಂಧಿಸಲಾಗುವುದು" ಎಂಬುದಾಗಿ ಪೊಲೀಸರು ತನ್ನ ತಾಯಿಗೆ ಎಚ್ಚರಿಗೆ ನೀಡಿರುವುದಾಗಿ ಹಸನ್ ಹೇಳುತ್ತಾರೆ.
ಈ ಪ್ರಕರಣದಿಂದ ನೊಂದಿರುವ ಹಸನ್, ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲು ಸ್ಥಳೀಯ ಪತ್ರಕರ್ತರ ಸಹಾಯ ಪಡೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
"ಈ ಕುರಿತು ನಾವು ತನಿಖೆ ಆರಂಭಿಸಿದ್ದೇವೆ. ಸೂಕ್ತ ತನಿಖೆ ನಡೆಸದೆ ಹಸನ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ವಿರುದ್ಧ ಕಠಿಮ ಕ್ರಮ ಕೈಗೊಳ್ಳಲಾಗುವುದು" ಎಂಬುದಾಗಿ ಡಿಎಸ್ಪಿ ಹರಿಶಂಕರ್ ಶುಕ್ಲಾ ಹೇಳಿದ್ದಾರೆ.