ದ್ವಿಪತ್ನಿತ್ವವು ನೈಜ ಇಸ್ಲಾಮೀ ಕಾನೂನಿಗೆ ವಿರುದ್ಧವಾಗಿದೆ ಮತ್ತು ಭಾರತದಲ್ಲಿ ಜಾರಿಯಲ್ಲಿರುವ ಮುಸ್ಲಿಂ ಕಾನೂನು ಪ್ರಕಾರ ಮುಸ್ಲಿಂ ಪುರುಷರು ಏಕಕಾಲಕ್ಕೆ ನಾಲ್ವರು ಪತ್ನಿಯನ್ನು ಹೊಂದಬಹುದು ಎಂಬುದು ತಪ್ಪು ಕಲ್ಪನೆ ಎಂಬುದಾಗಿ ಕಾನೂನು ಆಯೋಗ ಹೇಳಿದೆ.
"ಬಹುಪತ್ನಿತ್ವದ ಕುರಿತು ಮುಸ್ಲಿಂ ಕಾನೂನಿನ ಸಾಂಪ್ರಾದಾಯಿಕ ತಿಳುವಳಿಕೆಯು ತಪ್ಪು ಮತ್ತು ಇದು ನೈಜ ಇಸ್ಲಾಮ್ ಕಾನೂನಿನ ಸತ್ವ ಮತ್ತು ಸಾರಕ್ಕೆ ವೈರುಧ್ಯವಾದುದು" ಎಂಬುದಾಗಿ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ತನ್ನ 227ನೆ ವರದಿಯಲ್ಲಿ ಹೇಳಿದೆ. ಇದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಆರ್. ಲಕ್ಷ್ಮಣನ್ ಮತ್ತು ಸದಸ್ಯರಾದ ತಾಹಿರ್ ಮಹ್ಮೂದ್ ಮತ್ತು ಬಿ.ಎ. ಅಗರ್ವಾಲ್ ಅವರುಗಳ ಅವಿರೋಧ ಅಭಿಪ್ರಾಯವಾಗಿದೆ.
ಅದಾಗ್ಯೂ, ಮುಸ್ಲಿಂ ಕಾನೂನಿಗೆ ಬದಲಾವಣೆ ತರುವ ಶಿಫಾರಸ್ಸನ್ನು ಸಮಿತಿ ತಡೆದಿದೆ. ಧಾರ್ಮಿಕ ನಾಯಕರು ಇಂತಹ ಶಾಸನಾತ್ಮಕ ಸುಧಾರಣೆಗೆ ಸಿದ್ಧವಿರದ ಕಾರಣ ಇಂತಹ ಶಿಫಾರಸ್ಸು 'ಅನಾರೋಗ್ಯಕರ ವಿವಾದಕ್ಕೆ' ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಆಯೋಗ ಈ ಧೋರಣೆ ತಳೆದಿದೆ.
"ಮುಸ್ಲಿಂ ಕಾನೂನಿನ ಪ್ರಕಾರ ಪತಿಯೊಬ್ಬ, ಒಂದು ಮದುವೆ ಚಾಲ್ತಿಯಲ್ಲಿ ಇರುವಾಗಲೇ ಇನ್ನೊಂದು ಮದುವೆಯಾಗಲು ಮುಕ್ತ ಹಕ್ಕು ಹೊಂದಿದ್ದಾನೆ ಎಂಬುದು ಸಾಮಾನ್ಯ ನಂಬುಗೆ. ಕುರಾನ್ನ ಅನುಬಂಧಗಳು ಮತ್ತು ಇತರ ಇಸ್ಲಾಮಿಕ್ ಮೂಲಗಳನ್ನು ನಿಕಟವಾಗಿ ಪರೀಕ್ಷಿಸಿದರೆ ಇದು ಸತ್ಯವೆಂದು ತೋರುವುದಿಲ್ಲ" ಎಂದು ಅದು ಹೇಳಿದೆ.
ದ್ವಿಪತ್ನಿತ್ವವನ್ನು ಹೆಚ್ಚಿನ ಮುಸ್ಲಿಂ ರಾಷ್ಟ್ರಗಳಲ್ಲಿ ತೊಡೆದು ಹಾಕಲಾಗಿದೆ ಅಥವಾ ನಿಯಂತ್ರಿಸಲಾಗಿದೆ ಎಂದು ಆಯೋಗವು ತನ್ನ ವಾದವನ್ನು ಸಮರ್ಥಿಸುತ್ತಾ ಹೇಳಿದೆ. "ಟರ್ಕಿ, ತುನಿಸಿಯಾ ರಾಷ್ಟ್ರಗಳು ದ್ವಿಪತ್ನಿತ್ವವನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದರೆ ಈಜಿಪ್ಟ್, ಸಿರಿಯಾ, ಜೋರ್ಡಾನ್, ಇರಾಕ್, ಯೆಮನ್, ಮೋರೊಕ್ಕೋ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಇದು ಆಡಳಿತಾತ್ಮಕ ಅಥವಾ ನ್ಯಾಯಿಕ ನಿಯಂತ್ರಣದಲ್ಲಿದೆ" ಎಂದು ಆಯೋಗ ಬೆಟ್ಟುಮಾಡಿದೆ.
ಭಾರತದಲ್ಲಿ ದ್ವಿಪತ್ನಿತ್ವವು ಅತ್ಯಂತ ಸಹಜ ಎಂಬಂತಿಲ್ಲ. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಪ್ರಕರಣ ವಿರಳ. ಭಾರತದ ಮುಸ್ಲಿಂ ಸಮುದಾಯವು ಬಹುಪತ್ನಿತ್ವದ ಕುರಿತು ಅಸಮ್ಮತಿ ಹೊಂದಿದೆ ಮತ್ತು ಇಂತಹ ವ್ಯಕ್ತಿಗಳನ್ನು ಕುಟುಂಬದ ಒಳಗೆ ಮತ್ತು ಹೊರಗೆ ಕೀಳಾಗಿ ಪರಿಗಣಿಸಲಾಗುತ್ತದೆ" ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ.
ಆದರೆ, "ದುರದೃಷ್ಟಕರವೆಂಬಂತೆ ಧಾರ್ಮಿಕ ನಾಯಕರು ಈ ಕುರಿತು ಯಾವುದೇ ಶಾಸನಾತ್ಮಕ ಸುಧಾರಣೆಗೆ ಸಿದ್ಧವಾಗಿಲ್ಲ ಮತ್ತು ಧಾರ್ಮಿಕ ಸೂಕ್ಷ್ಮತೆಯು ಈ ರಾಷ್ಟ್ರದಲ್ಲಿ ಯಾವುದೇ ಸುಧಾರಣೆಯನ್ನು ತರಲು ಅನುವು ನೀಡುತ್ತಿಲ್ಲ" ಎಂದು ವರದಿ ಹೇಳಿದೆ.
ಈ ವರದಿಯನ್ನು ನ್ಯಾಯಮೂರ್ತಿ ಲಕ್ಷ್ಮಣನ್ ಅವರು ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರಿಗೆ ಸಲ್ಲಿಸಿದ್ದಾರೆ.