ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಒದಗಿಸುವ ವಿದ್ಯಾರ್ಥಿವೇತನವನ್ನು ಗುಜರಾತ್ ಸರ್ಕಾರ ನಿರಾಕರಿಸಲಾಗಿದೆ ಎನ್ನಲಾಗಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಇದರಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.
ಕೇಂದ್ರ ಪ್ರಾಯೋಜಿತ ಅಲ್ಪಸಂಖ್ಯಾತರ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನದ ಶೇ.25ರಷ್ಟನ್ನು ಭರಿಸಲು ಇಚ್ಛಿಸದ ಏಕೈಕ ರಾಜ್ಯ ಸರ್ಕಾರ ಗುಜರಾತ್ ಆಗಿದೆ. ಕೇಂದ್ರವು ಸುಮಾರು 22 ಲಕ್ಷ ವಿದ್ಯಾರ್ಥಿ ವೇತನವನ್ನು ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಇದರಲ್ಲಿ 57,000ದಷ್ಟು ಗುಜರಾತಿನ ಪಾಲಾಗಿದೆ. ಯೋಜನೆಯನ್ವಯ ಶೇ.75ರಷ್ಟನ್ನು ಕೇಂದ್ರ ಭರಿಸಿದರೆ ಉಳಿದ ಶೇ.25ರಷ್ಟನ್ನು ರಾಜ್ಯ ಭರಿಸಬೇಕಾಗಿದೆ.
ವಾರ್ಷಿಕ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಮುಸ್ಲಿಂ ಕುಟುಂಬದ ಪ್ರತೀ ಮಗು ಈ ವಿದ್ಯಾರ್ಥಿ ವೇತನಕ್ಕೆ ಆರ್ಹವಾಗಿದ್ದು, 800ರಿಂದ 1500 ರೂಪಾಯಿ ಒದಗಿಸಲಾಗುತ್ತದೆ.
ಸಮುದಾಯ ಒಂದರ ಅಲ್ಪಸಂಖ್ಯಾತ ಆಧಾರಿತ ಇಂತಹ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗುವುದಿಲ್ಲ ಎಂದು ಕಳೆದ ವರ್ಷ ಗುಜರಾತ್ ಕಳೆದ ವರ್ಷ ಸರ್ಕಾರಕ್ಕೆ ಪತ್ರ ಬರೆದಿದೆ. ಈ ವರ್ಷವೂ, ಪುನರಪಿಯಾಗಿ ನೆನಪಿಸಿದರೂ, ರಾಜ್ಯಸರ್ಕಾರವು ಈ ಉದ್ದೇಶಕ್ಕಾಗಿ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಇದರಿಂದಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದಿಂದ ವಂಚಿತರಾದಂತಾಗಿದೆ.
ಇದು ಅಸಾಂವಿಧಾನಿಕ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮಾನು ಸಿಂಘ್ವಿ ಹೇಳಿದ್ದಾರೆ. ಈ ವಿದ್ಯಾರ್ಥಿವೇತನ ಯೋಜನೆಯು ಅಲ್ಪಸಂಖ್ಯಾತರಿಗಾಗಿ ಪ್ರಧಾನಿಯವರ 15 ಅಂಶದ ಕಾರ್ಯಕ್ರಮದ ಭಾಗವಾಗಿದ್ದು, ಗುಜರಾತ್ ಇದನ್ನು ವಿರೋಧಿಸುತ್ತಿರುವ ಏಕೈಕ ರಾಜ್ಯವಾಗಿದೆ.