ಅತ್ತ ಕೇಂದ್ರ ಸರ್ಕಾರವು ಹಂದಿಜ್ವರ ಕುರಿತು ಭೀತರಾಗಬೇಕಿಲ್ಲ, ರೋಗವನ್ನು ಎದುರಿಸಲು ಸರ್ಕಾರ ಸರ್ವ ಸನ್ನದ್ದವಾಗಿದೆ ಎಂದು ಹೇಳುತ್ತಲೇ ಇದ್ದರೂ, ಇತ್ತ ಸೋಂಕು ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ದೇಶಾದ್ಯಂತ ಶುಕ್ರವಾರ ಒಂದೇ ದಿನದಲ್ಲಿ 96 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ದಿನ ಒಂದರಲ್ಲೇ ಪತ್ತೆಯಾದ ಗರಿಷ್ಠ ಸಂಖ್ಯೆಯಾಗಿದ್ದು, ಶನಿವಾರವೂ ಹೊಸಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.
ಅಹ್ಮದಾಬಾದಿನ ಆನಿವಾಸಿ ದಂಪತಿಗಳಲ್ಲಿ ಎಚ್1ಎನ್1 ವೈರಸ್ ಸೋಂಕು ಪತ್ತೆಯಾಗಿದ್ದು ಅವರನ್ನು ಅಲ್ಲಿನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ದಂಪತಿಗಳು ಅಮೆರಿಕದಿಂದ ಮರಳಿದ್ದರು. ಇದರಿಂದಾಗಿ ಗುಜರಾತಿನಲ್ಲಿ ಹಂದಿರೋಗ ಪೀಡಿತರ ಸಂಖ್ಯೆ 10ಕ್ಕೇರಿದೆ.
ಈ ಮಧ್ಯೆ ಪುಣೆಯು ಕ್ಷಿಪ್ರವಾಗಿ ಸೋಂಕು ಹರಡುವ ಕೇಂದ್ರವಾಗುತ್ತಿದೆ. ಆರು ತಿಂಗಳ ಬಾಲಕಿ ಸೇರಿದಂತೆ ಇನ್ನೂ ಐದು ಮಂದಿ ಸಸ್ಸೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರ ಸ್ಥಿತಿ ಗಂಭೀರವಾಗಿದೆ. ಇವರಲ್ಲೊಬ್ಬರು ವೈದ್ಯರಾಗಿದ್ದಾರೆ. ಈ ಎಲ್ಲಾ ರೋಗಿಗಳನ್ನು ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಂಢೀಗಢದಲ್ಲಿ 29ರ ಹರೆಯ ಎಂಜೀನಿಯರ್ ಒಬ್ಬರಿಗೆ ಈ ರೋಗ ಪತ್ತೆಯಾಗಿದೆ. ಈತ ತನ್ನ ಸಹೋದ್ಯೋಗಿಗಳೊಂದಿಗೆ ಕೆನಡಾಗೆ ತೆರಳಿದ್ದರು. ಅವರ ಸಹೋಗ್ಯೋಗಿಗಳಿಗೂ ಈ ರೋಗ ಸೋಂಕಿದ್ದು, ಅವರು ನವದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.