ಪಾಕಿಸ್ತಾನ ಗಡಿಯುದ್ದಕ್ಕೂ ಅಕ್ರಮ ನುಸುಳುವಿಕೆ ಹೆಚ್ಚಿದೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ. ಜಮ್ಮು ಕಾಶ್ಮೀರ ಗಡಿಯಾದ್ಯಂತ ನಡೆದಿರುವ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ 13 ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಕೆಲವೇ ದಿನಗಳಲ್ಲಿ ಸಚಿವರ ಹೇಳಿಕೆ ಹೊರಬಿದ್ದಿದೆ.
ಚಳಿಗಾಲ ಆರಂಭಕ್ಕೆ ಮುಂಚಿತವಾಗಿ ಕಾಶ್ಮೀರ ಕಣಿವೆ ಮೂಲಕ ಚಿಕ್ಕಚಿಕ್ಕ ತಂಡಗಳಾಗಿ ಹೆಚ್ಚೆಚ್ಚು ಉಗ್ರರು ನುಸುಳಲು ಯತ್ನಿಸುತ್ತಿದ್ದಾರೆ ಎಂಬ ಸೇನಾಧಿಕಾರಿಗಳ ಇತ್ತೀಚೆಗಿನ ಹೇಳಿಕೆಯನ್ನು ಸಚಿವರ ಈ ಹೇಳಿಕೆ ಪ್ರತಿಧ್ವನಿಸುತ್ತದೆ,
ರಾಜ್ಯದಲ್ಲಿ ಕಳೆದ ಶನಿವಾರದಿಂದೀಚೆಗೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 13 ಉಗ್ರರು ಹಾಗೂ ಇಬ್ಬರು ಸೈನಿಕರು ಸೇರಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾಪಡೆಗಳು ನಾಲ್ಕು ಅಕ್ರಮ ನುಸುಳುವಿಕೆ ಸಂಚನ್ನು ಬೇಧಿಸಿದ್ದು, ಮಂಗಳವಾರ ರಾತ್ರಿ ಎಂಟು ಮಂದಿ ಉಗ್ರರನ್ನು ಗುಂಡಿಕ್ಕಿ ಕೊಂದಿದ್ದರು. ಜಮ್ಮುವಿನ ಮರ್ಮತ್ ದೋಡಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ಲ ಕಮಾಂಡರ್ ನೂರ್ ಮೊಹಮ್ಮದ್ ಖಾದಿರ್ ಸಾವನ್ನಪ್ಪಿದ್ದಾನೆ.
ಇದ್ದಕ್ಕಿದ್ದಂತೆ ಈ ಪರಿಯಲ್ಲಿ ಹಿಂಸಾಚಾರ ಹೆಚ್ಚಲು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಳಿಗೆ ಬರುತ್ತಿರುವುದು ಕಾರಣವಾಗಿದ್ದು, ಇದನ್ನು ಅಸ್ಥಿರಗೊಳಿಸಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸರು ಹೇಳುತ್ತಾರೆ.